
ನವದೆಹಲಿ: ಉತ್ತಮ ದತ್ತಾಂಶ ವ್ಯವಸ್ಥೆಗಳ ಮೂಲಕ ಹಣಕಾಸು ವಿಕೇಂದ್ರೀಕರಣ ಮತ್ತು ತಳಮಟ್ಟದ ಆಡಳಿತವನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರವು ರಾಜ್ಯ ಹಣಕಾಸು ಆಯೋಗಗಳಿಗೆ ಸಂಬಂಧಿಸಿದ ದತ್ತಾಂಶ ವರದಿಯನ್ನು ಬಿಡುಗಡೆ ಮಾಡಿದೆ.
ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಅವರು ಪಂಚಾಯತ್ ರಾಜ್ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವರದಿಯನ್ನು ಬಿಡುಗಡೆ ಮಾಡಿದರು. ರಾಜ್ಯ ಹಣಕಾಸು ಆಯೋಗಗಳು ಸಂಪನ್ಮೂಲ ಹಂಚಿಕೆ ಕುರಿತು ಪರಿಣಾಮಕಾರಿ ಶಿಫಾರಸುಗಳನ್ನು ನೀಡಲು ವಿಶ್ವಾಸಾರ್ಹ, ಸಮಯೋಚಿತ ಮತ್ತು ವಿವರವಾದ ದತ್ತಾಂಶ ಅಗತ್ಯ ಎಂದು ಅವರು ಹೇಳಿದರು.
ಕುಡಿಯುವ ನೀರು, ರಸ್ತೆ, ಬೀದಿ ದೀಪ, ಅಂಗನವಾಡಿ ಸೇರಿದಂತೆ ಮೂಲಭೂತ ಸೇವೆಗಳ ಮೂಲಕ ಜನರು ಆಡಳಿತವನ್ನು ಅನುಭವಿಸುತ್ತಾರೆ. ಆದ್ದರಿಂದ ಬಲಿಷ್ಠ ಪಂಚಾಯತ್ ವ್ಯವಸ್ಥೆ ಉತ್ತಮ ಆಡಳಿತಕ್ಕೆ ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಅವರು ರಾಜ್ಯ ಹಣಕಾಸು ಆಯೋಗಗಳು ಮತ್ತು ಕೇಂದ್ರ ಹಣಕಾಸು ಆಯೋಗಗಳ ನಡುವೆ ಉತ್ತಮ ಸಮನ್ವಯ ಅಗತ್ಯ ಎಂದು ಒತ್ತಿ ಹೇಳಿದರು.
ವರದಿಯು ಪಂಚಾಯತ್ ಮಟ್ಟದ ಹಣಕಾಸು ದತ್ತಾಂಶ ಸಂಗ್ರಹ, ಲೆಕ್ಕಪತ್ರ ವ್ಯವಸ್ಥೆಗಳ ಪ್ರಮಾಣೀಕರಣ, ರಾಜ್ಯ ಹಣಕಾಸು ಆಯೋಗಗಳಿಗೆ ಪ್ರತ್ಯೇಕ ಘಟಕಗಳ ಸ್ಥಾಪನೆ ಹಾಗೂ ಸಾಮಾನ್ಯ ವರದಿ ವಿಧಾನಗಳನ್ನು ಅಳವಡಿಸುವಂತೆ ಶಿಫಾರಸು ಮಾಡಿದೆ.
ಸ್ಥಳೀಯ ಸಂಸ್ಥೆಗಳ ಯೋಜನೆ ಮತ್ತು ನಿರ್ಧಾರ ಕೈಗೊಳ್ಳುವಿಕೆಯಲ್ಲಿ ದತ್ತಾಂಶದ ಬಳಕೆಯನ್ನು ಹೆಚ್ಚಿಸುವ ಅಗತ್ಯವನ್ನೂ ವರದಿ ಪ್ರಸ್ತಾಪಿಸಿದೆ.
ಸಂವಿಧಾನದ 243-I ವಿಧಿಯಡಿ ರಚಿಸಲಾದ ರಾಜ್ಯ ಹಣಕಾಸು ಆಯೋಗಗಳು ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ ಸಂಪನ್ಮೂಲ ಹಂಚಿಕೆಯ ಕುರಿತು ಶಿಫಾರಸುಗಳನ್ನು ನೀಡುತ್ತವೆ. ಈ ಹೊಸ ಚೌಕಟ್ಟು ವಿಕ್ಷಿತ್ ಭಾರತ @2047 ಗುರಿಗೆ ಪೂರಕವಾಗಿ ಸ್ಥಳೀಯ ಆಡಳಿತವನ್ನು ಬಲಪಡಿಸುವ ನಿರೀಕ್ಷೆಯಿದೆ.
