Wednesday, March 18

ಕಾಲ್ತುಳಿತ ಪ್ರಕರಣ: ಸರ್ಕಾರದ ಮೇಲೆ ಆರೋಪ ಬರಬಾರದೆಂದು ಮೊದಲೇ ಹೇಳಿ ವರದಿ ಬರೆಸಲಾಗಿದೆಯೇ?

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಪೊಲೀಸರನ್ನು ಬಲಿಪಶು ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆಯುಕ್ತರು, ಡಿಸಿಪಿ ಮೇಲೆ ಆರೋಪ ಹೊರೆಸಿ ಕೈ ತೊಳೆದುಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಎಲ್ಲ ಬಂದೋಬಸ್ತ್‌ ಮಾಡಿದ್ದರೆ, ಈ ಸಮಸ್ಯೆ ಆಗುತ್ತಿರಲಿಲ್ಲ. ಏನೂ ಮಾಡದೆ ಪೊಲೀಸರ ಮೇಲೆ ತಪ್ಪು ಹೊರಿಸಲಾಗಿದೆ ಎಂದು ಸಿಟ್ಟು ಹೊರಹಾಕಿದರು.

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ತಪ್ಪು ಕೂಡ ಇಲ್ಲ. ಸರ್ಕಾರದ ಮೇಲೆ ಆರೋಪ ಬರಬಾರದೆಂದು ಮೊದಲೇ ಹೇಳಿ ವರದಿ ಬರೆಸಲಾಗಿದೆ. ಇದು ಯೋಗ್ಯವಾದ ವರದಿ ಅಲ್ಲ. ಕೋರ್ಟ್‌ನಲ್ಲಿ ಬರುವ ತೀರ್ಪಿನ ಬಗ್ಗೆ ಮಾತ್ರ ನಂಬಿಕೆ ಇದೆ ಎಂದರು.

ಕಾಂಗ್ರೆಸ್ ಪಕ್ಷದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತೇನೆ ಎಂದು ತಿಳಿದು ದೇವಾಲಯಗಳನ್ನು ಸುತ್ತುತ್ತಿದ್ದಾರೆ. ಬದಲಾವಣೆ ಬಗ್ಗೆ ಹೈಕಮಾಂಡ್‌ನಲ್ಲಿ ಚರ್ಚೆಯಾಗಿದೆ. ಡಿ.ಕೆ.ಶಿವಕುಮಾರ್‌ ಪಟ್ಟು ಬಿಡದೆ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತಾರೆ. ಸಿಎಂ ಬದಲಾವಣೆ ಖಂಡಿತ ಆಗಲಿದೆ ಎಂದರು.