Saturday, April 11

‘ನನಗೆ ನನ್ನ ಗುರಿ ಗೊತ್ತಿದೆ, ನನಗೆ ಯಾವ ಆತುರವೂ ಇಲ್ಲ’: ಸಿಎಂ ಕನಸಿನ ಬಗ್ಗೆ ಡಿಕೆಶಿ ಮಾತು

ಬೆಂಗಳೂರು: ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿರುವ ಡಿಕೆಶಿ, ‘ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ. ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಕೆಲವರು ಕೇಳಿದ ಪ್ರಶ್ನೆಯನ್ನು ಕೆಲವು ಮಾಧ್ಯಮಗಳು ತಿರುಚಿ ವರದಿ ಮಾಡಿ ವಿವಾದ ಸೃಷ್ಟಿಸುತ್ತಿರುವುದು ಬೇಸರ ತಂದಿದೆ’ ಎಂದು ಬರೆದುಕೊಂಡಿದ್ದಾರೆ.

‘ನನಗೆ ನನ್ನ ಗುರಿ ಗೊತ್ತಿದೆ, ನನಗೆ ಯಾವ ಆತುರವೂ ಇಲ್ಲ, ಈ ರೀತಿ ಹೇಳುವ ಅವಶ್ಯಕತೆಯೂ ಇಲ್ಲ’ ಎಂದವರು ಹೇಳಿದ್ದಾರೆ.

‘ನಾನು ಯಾವುದೇ ಹುದ್ದೆಗಾಗಿ ಆತುರದಲ್ಲಿಲ್ಲ. ರಾಜ್ಯದ ಜನರ ಸೇವೆ ಮತ್ತು ಬೆಂಗಳೂರು ನಾಗರಿಕರಿಗೆ ಉತ್ತಮ ಆಡಳಿತ ನೀಡುವುದೇ ನನ್ನ ಉದ್ದೇಶ. ನಾನು ಸಾರ್ವಜನಿಕರ ಸೇವೆಗಾಗಿಯೇ ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆ. ಸತ್ಯವನ್ನು ತಿರುಚಿ, ದಾರಿ ತಪ್ಪಿಸುವ ವರದಿಗಳಿಂದ ದೂರವಿರುವಂತೆ ಮಾಧ್ಯಮ ಮಿತ್ರರಲ್ಲಿ ನನ್ನ ಮನವಿ’ ಎಂದವರು ಬರೆದುಕೊಂಡಿದ್ದಾರೆ.