Sunday, September 7

ಆಪರೇಷನ್ ಸಿಂಧೂರ್‌ ನಂತರ: 15 ವರ್ಷಗಳ ರಕ್ಷಣಾ ಮಾರ್ಗಸೂಚಿ ಅನಾವರಣ

ನವದೆಹಲಿ: ಆಪರೇಷನ್ ಸಿಂಧೂರ್‌ ಯಶಸ್ವೀ ಕಾರ್ಯಾಚರಣೆಯ ನಾಲ್ಕು ತಿಂಗಳ ನಂತರ, ಮೋದಿ ಸರ್ಕಾರವು ಭಾರತೀಯ ಸಶಸ್ತ್ರ ಪಡೆಗಳ ಶಕ್ತಿಯನ್ನು ಅಭಿವೃದ್ಧಿಪಡಿಸಲು 15 ವರ್ಷದ ಉದ್ದೇಶಿತ ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ. ಈ ಅವಧಿಯಲ್ಲಿ ದೇಶದ ಸೇನೆ ಶತಕೋಟಿ ಡಾಲರ್‌ ಹೂಡಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಪರಿವರ್ತನೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತೀಯ ಸೇನೆ ಸೋವಿಯತ್ ಯುಗದ T-72 ಟ್ಯಾಂಕ್‌ ಫ್ಲೀಟ್‌ ಬದಲಿಸಲು ಸುಮಾರು 1,800 ಮುಂದಿನ ತಲೆಮಾರಿಯ ಟ್ಯಾಂಕ್‌ಗಳನ್ನು ಪಡೆಯಲಿದೆ. ಜೊತೆಗೆ 400 ಪರ್ವತ ಯುದ್ಧ ಲಘು ಟ್ಯಾಂಕ್‌ಗಳು, 50,000 ಟ್ಯಾಂಕ್-ವಿರೋಧಿ ಮಾರ್ಗದರ್ಶಿತ ಕ್ಷಿಪಣಿಗಳು ಮತ್ತು 700ಕ್ಕೂ ಹೆಚ್ಚು ರೋಬೋಟಿಕ್ ಕೌಂಟರ್-IED ವ್ಯವಸ್ಥೆಗಳನ್ನೂ ಸೇರಿಸಲಾಗಿದೆ.

ನೌಕಾಪಡೆಗೆ ಹೊಸ ವಿಮಾನವಾಹಕ ನೌಕೆ, 10 ಮುಂದಿನ ಪೀಳಿಗೆಯ ಯುದ್ಧನೌಕೆಗಳು, 7 ಸುಧಾರಿತ ಕಾರ್ವೆಟ್‌ಗಳು ಹಾಗೂ 4 ಲ್ಯಾಂಡಿಂಗ್ ಡಾಕ್ ಪ್ಲಾಟ್‌ಫಾರ್ಮ್‌ಗಳನ್ನು ಪಡೆಯಲಿದೆ.

ವಾಯುಪಡೆಗೆ 75 ಎತ್ತರದ UAV ಉಪಗ್ರಹಗಳು, 150 ಸ್ಟೆಲ್ತ್ ಬಾಂಬರ್ ಡ್ರೋನ್‌ಗಳು, ನೂರಾರು ನಿಖರ-ಮಾರ್ಗದರ್ಶಿತ ಯುದ್ಧಸಾಮಗ್ರಿಗಳು ಮತ್ತು 100ಕ್ಕೂ ಹೆಚ್ಚು ರಿಮೋಟ್ ಪೈಲಟ್ ವಿಮಾನಗಳು ಸೇರ್ಪಡೆಯಾಗಲಿವೆ.

ಮಾರ್ಗಸೂಚಿಯಲ್ಲಿ ನ್ಯೂಕ್ಲಿಯರ್ ಚಾಲಿತ ಯುದ್ಧನೌಕೆಗಳು, AI-ಚಾಲಿತ ಶಸ್ತ್ರಾಸ್ತ್ರಗಳು, ಬಾಹ್ಯಾಕಾಶ ಆಧಾರಿತ ಯುದ್ಧ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದನ್ನು ವಿಶ್ವದ ಇತ್ತೀಚಿನ ಸಂಘರ್ಷಗಳಿಂದ—ರಷ್ಯಾ-ಉಕ್ರೇನ್, ಇಸ್ರೇಲ್-ಗಾಜಾ, ಇಸ್ರೇಲ್-ಇರಾನ್-ಅಮೆರಿಕ ಸಂಘರ್ಷಗಳು—ಕಲಿತ ಪಾಠಗಳನ್ನು ಅನ್ವಯಿಸಿ ರೂಪಿಸಲಾಗಿದೆ ಎಂದು ವರದಿಗಳು ತಿಳಿಸಿದ್ದಾರೆ.

ಶುಕ್ರವಾರ ಗೋರ್ಕಪುರದಲ್ಲಿ ಮಾತನಾಡಿದ ಸಿಡಿಎಸ್ ಅನಿಲ್ ಚೌಹಾಣ್, ಭಾರತ ಎದುರಿಸುತ್ತಿರುವ ಆರು ಪ್ರಮುಖ ಭದ್ರತಾ ಸವಾಲುಗಳ ಬಗ್ಗೆ ತಿಳಿಸಿದರು. ಅದರಲ್ಲಿ ಚೀನಾದೊಂದಿಗೆ ನಿರೂಪಣೆಯಾಗದ ಗಡಿ ವಿವಾದ ಪ್ರಮುಖವಾಗಿದೆ. ಈ ಘರ್ಷಣೆ 1947, 1962, 1965 ರ ಯುದ್ಧಗಳಿಗೆ ನಾಂದಿ ಹಾಡಿದ್ದಂತೆ, ಪಾಕಿಸ್ತಾನದ ಪ್ರಾಕ್ಸಿ ಯುದ್ಧ ತಂತ್ರವು ದೇಶದ ಭದ್ರತೆಗೆ ಹೊಸ ತೊಂದರೆ ಸೃಷ್ಟಿಸುತ್ತಿದೆ.

ಈ 15 ವರ್ಷದ ಮಾರ್ಗಸೂಚಿಯನ್ನು ಭಾರತೀಯ ಭದ್ರತಾ ವ್ಯವಸ್ಥೆಯ ಶಕ್ತಿ ಮತ್ತು ತಂತ್ರಜ್ಞಾನವನ್ನು 21ನೇ ಶತಮಾನದ ಬೆದರಿಕೆಗಳಿಗೆ ಸಜ್ಜುಗೊಳಿಸುವ ಮಹತ್ತರ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.