Tuesday, June 24

ಕದನ ವಿರಾಮ ಉಲ್ಲಂಘಿಸಿ ಪಾಕ್ ಕಿತಾಪತಿ; ದಾಳಿ ಯತ್ನ ವಿಫಲ

ನವದೆಹಲಿ: ಭಾರತ-ಪಾಕಿಸ್ತಾನ ನಡುವೆ ಕೆಲವು ದಿನಗಳಿಂದ ನಡೆಯುತ್ತಿದ್ದ ಸಮರಕ್ಕೆ ಶನಿವಾರ ತಾತ್ಕಾಲಿಕ ವಿರಾಮ ಘೋಷಿಸಲಾಗಿದ್ದರೂ ಪಾಕ್ ಕಿತಾಪತಿಯಿಂದಾಗಿ ಉಭಯ ದೇಶಗಳ ನಡುವೆ ದಾಳಿ-ಪ್ರತಿದಾಳಿ ಮುಂದುವರಿದಿದೆ.

ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮವನ್ನು ಆಚರಿಸಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದದ ನಂತರ ಶಾಂತ ಸ್ಥಿತಿ ನಿರ್ಮಾಣವಾಯಿತು. ನಿನ್ನೆ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಒಪ್ಪಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಘೋಷಿಸಿದರು.

ಆದರೆ, ಕದನ ವಿರಾಮ ಘೋಷಣೆಯಾದ ಕೆಲವೇ ತಾಸುಗಳಲ್ಲಿ ಕಾಶ್ಮೀರ ಕಣಿವೆಯ ಮೇಲೆ ಪಾಕಿಸ್ತಾನ ಸೇನೆ ಡ್ರೋನ್‌ ದಾಳಿಗೆ ಪ್ರಯತ್ನಿಸಿದೆ.ಭಾರತ ಅದಕ್ಕೆ ಸೂಕ್ತ ಕ್ರಮವಹಿಸಿ ದಾಳಿಯನ್ನು ತಡೆದಿದೆ ಎಂದು ಮೂಲಗಳು ತಿಳಿಸಿವೆ.