Tuesday, March 17

ಮೈಸೂರು ದಸರಾದಲ್ಲಿ ಏರ್ ಶೋ ಆಯೋಜನೆ: ಕೇಂದ್ರಕ್ಕೆ ಸಿಎಂ ಮನವಿ

ನವದೆಹಲಿ: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಏರ್ ಶೋ ಈ ವರ್ಷವೂ ನಡೆಯುವ ಸಾಧ್ಯತೆ ಇದೆ. ದೆಹಲಿಯಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಂಬಂಧ ಚರ್ಚೆ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನದ ವೇಳೆಗೆ ರಕ್ಷಣಾ ಸಚಿವರನ್ನು ಭೇಟಿಯಾದ ಸಿಎಂ, “ಸೆಪ್ಟೆಂಬರ್ ಕೊನೆ ವಾರದಲ್ಲಿ ನಡೆಯಲಿರುವ ದಸರಾ ಉತ್ಸವದ ಅಂಗವಾಗಿ ವಿಮಾನ ಪ್ರದರ್ಶನ (ಎಯರ್ ಶೋ) ಆಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.

ಪ್ರತಿ ವರ್ಷ ದಸರಾ ಹಬ್ಬದ ವೇಳೆ ಭಾರತೀಯ ವಾಯುಪಡೆಯ ವಿಮಾನಗಳು ಮೈಸೂರಿನ ಆಕಾಶದಲ್ಲಿ ಕೌಶಲ್ಯದ ಪ್ರದರ್ಶನ ನೀಡುತ್ತವೆ. “ಈ ಬಾರಿ ಮತ್ತಷ್ಟು ಭವ್ಯವಾಗಿ ಏರ್ಪಡಿಸಲು ನಾವು ಮುಂದಾಗಿದ್ದೇವೆ” ಎಂದು ಅವರು ಹೇಳಿದರು.

ಇದೇ ವೇಳೆ, ಬೆಂಗಳೂರು ಮತ್ತು ಸುತ್ತಮುತ್ತಲ ಡಿಫೆನ್ಸ್ ಕಾರಿಡಾರ್ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು. ಈ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ರಕ್ಷಣಾ ಇಲಾಖೆಯು ಒದಗಿಸುವ ಕುರಿತು ಸಹ ಮಾತುಕತೆ ನಡೆದಿದೆ.

“ರಕ್ಷಣಾ ಇಲಾಖೆಯು ಹೊಂದಿರುವ ಜಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ನೀಡುವಂತೆ ನಾವು ಮನವಿ ಮಾಡಿದ್ದೇವೆ. ಈ ಕುರಿತು ಸಚಿವರ ಪ್ರತಿಕ್ರಿಯೆ ಸದ್ಭಾವಪೂರ್ಣವಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.