
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯದ 10 ಮಹಾನಗರ ಪಾಲಿಕೆಗಳ ಅಧಿಕಾರಿ ಹಾಗೂ ನೌಕರರು ಜುಲೈ 7ರಂದು ಸಾಮೂಹಿಕ ರಜೆ ಪಡೆದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಸಾವಿರಾರು ನೌಕರರ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು (ರಿ) ಅಧ್ಯಕ್ಷ ಎ. ಅಮೃತ್ ರಾಜ್ ಮಾಹಿತಿ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಬಗ್ಗೆ ನಗರಾಭಿವೃದ್ಧಿ ಸಚಿವರು ಹಾಗೂ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನೌಕರರ ಪರ ಸಂಘಟನೆಯು ಈ ಬಾರಿ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟ ಭರವಸೆ ಬಾರದ ಹಿನ್ನಲೆಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
ಮಹಾನಗರ ಪಾಲಿಕೆ ನೌಕರರಿಗೆ ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ 7ನೇ ವೇತನ ಆಯೋಗದ ಸೌಲಭ್ಯ ನೀಡಬೇಕು.
ಆರ್ಥಿಕ ಇಲಾಖೆ ಮೂಲಕವೇ ಅನುಧಾನ ಬಿಡುಗಡೆ ಮಾಡಬೇಕು.
ಕರ್ನಾಟಕ ಮಹಾನಗರ ಪಾಲಿಕೆ ನೇಮಕಾತಿ ಮತ್ತು ವೃಂದ ನಿಯಮಾವಳಿಗಳ ತಿದ್ದುಪಡಿ ತಕ್ಷಣ ಮಾಡಬೇಕು.
KGID ಮತ್ತು GPF ಸೌಲಭ್ಯಗಳು, ಆರೋಗ್ಯ ಜ್ಯೋತಿ/ಸಂಜೀವಿನಿ ಯೋಜನೆಗಳು ಸೇರಿದಂತೆ ಸರ್ಕಾರಿ ನೌಕರರಿಗೆ ಇರುವ ಎಲ್ಲಾ ಸೌಲಭ್ಯಗಳು ಪಾಲಿಕೆ ನೌಕರರಿಗೂ ಜಾರಿಗೆ ತರಬೇಕು.
ಪ್ರತಿ ವರ್ಷ ಕ್ರೀಡಾಕೂಟ ಆಯೋಜನೆ, ವೃಂದವಾರು ಮುಂಬಡ್ತಿ ನಿಷ್ಪಾದನೆ ಕೂಡ ಬೇಡಿಕೆಯಲ್ಲಿವೆ.