Tuesday, June 24

ಅಂದು ಸುದ್ದಿ ನಿರೂಪಕ ಈಗ ಬೆಳ್ಳಿತೆರೆಯ ಹೀರೋ ರಾಘವ ಸೂರ್ಯ; ‘ರಮ್ಮಿ ಆಟ’ ಚಿತ್ರದ ಸುತ್ತ

📝 ಈಶ್ವರ್ ಸಿರಿಗೇರಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಮ್ಮಿ ಆಟ / ರಮ್ಮಿ ಗೇಮ್ ಮನುಕುಲದ ಅವನತಿ ಎಂಬ ಅಪವಾದವಿದೆ, ತಮ್ಮ ಜೀವವನ್ನೇ ಆಹುತಿ ಮಾಡಿಕೊಳ್ಳುತ್ತಿರುವ ಪ್ರಸ್ತುತ ಯುವ ಸಮೂಹದ ಬಗ್ಗೆ ಸೃಜನಶೀಲ ಕಥೆಯನ್ನುಟ್ಟುಕೊಂಡು, ಆನ್‌ಲೈನ್ ರಮ್ಮಿ ಆಡುವುದರಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ. ಜನ ಸಮೂಹವು ಯಾವೆಲ್ಲಾ ರೀತಿ ಮೋಸ ಹೋಗುತ್ತಾರೆ. ಹಾಗೆಯೇ ಆನ್‌ಲೈನ್‌ ರಮ್ಮಿ ಗೇಮ್‌ ಕುರಿತು ಜನರಿಗೆ ಎಚ್ಚರಿಕೆ ನೀಡುವಂತಹ ಸಿನಿಮಾವೊಂದು ಕನ್ನಡ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದೆ.

ಸೆಪ್ಟೆಂಬರ್ 20ರಿಂದಲೇ ‘ರಮ್ಮಿ ಆಟ”

ಈ ಸಿನಿಮಾ ಮೂಲಕ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿದ್ದ ರಾಘವ ಸೂರ್ಯ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದು ವಿಶೇಷ. ಈ ಆಟದಿಂದ ಏನೆಲ್ಲ‌ ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಸುದ್ದಿ ಸಂಸ್ಥೆಯಲ್ಲಿ ನಿರೂಪಕರಾಗಿದ್ದಾಗಲೇ ರಾಘವ ಸೂರ್ಯ ಅವರು ಈ ಚಿತ್ರದ ಆಫರ್ ಸ್ವೀಕರಿಸಿ, ಕಿರುತೆರೆಯಿಂದ ಬಿಗ್ ಸ್ಕ್ರೀನ್‌ಗೆ ಜಿಗಿದಿದ್ದಾರೆ. ಕನ್ನಡ ಮಾಧ್ಯಮ ಕ್ಷೇತ್ರದಲ್ಲಿನ ತಮ್ಮದೇ ಆದ ಛಾಪು ಮೂಡಿಸಿದ ಖ್ಯಾತ ನಿರೂಪಕರಾಗಿ ಕೆಲಸ ಮಾಡಿದ್ದು ನಂತರದಲ್ಲಿ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ಅವಿಸ್ಮರಣೀಯವಾಗಿದೆ. ಈ ಚಿತ್ರದಲ್ಲಿ ಇವರೇ ನಾಯಕ.

ಇದೇ ಮಾದರಿಯ ಗೇಮ್ ನಿಂದಾಗಿ ಪುರಾಣದ ಮಹಾಭಾರತದಲ್ಲಿ ಕುಕ್ಷೇತ್ರ ಯುದ್ಧವೇ ನಡೆದಿತ್ತು ಹಲವಾರು ರಾಜಮಹಾರಾಜರು ಈ ರೀತಿಯ ಗೇಮ್ ನಿಂದ ಎಲ್ಲವನ್ನೂ ಕಳೆದುಕೊಂಡ ಸಾಕಷ್ಟು ಕರಾಳ ಐತಿಹ್ಯಗಳಿವೆ. ಅಂತಹ ಜೂಜಾಟದ ಸುಧಾರಿತ ಅಂಗಳವೇ ‘ರಮ್ಮಿ ಆಟ’. ಈ ಆಟವವನ್ನು ಉತ್ತೇಜಿಸಬಾರದು. ಈ ಆಟದಿಂದಾಗುವ ಪರಿಣಾಮವನ್ನು ಚಿತ್ರದ ಮೂಲಕ ತಿಳಿಸಲು ಹೊಸ ತಂಡವೊಂದು ಹೊರಟಿರುವುದು ವಿಶೇಷ. ಇದುವೇ ಈ ಚಿತ್ರದ ಪ್ರಮುಖ ಸಾರ.

‘ರಮ್ಮಿ ಆಟ’ ಕಥೆಯನ್ನು ಉಮರ್ ಷರೀಫ್  ನಿರ್ದೇಶಿಸಿದ್ದಾರೆ. ರಮೇಶ್ ಯಾದವ್ ಹಾಗೂ ಹನುಮೇಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ.

ಬೆಂಗಳೂರಿನ ಸುತ್ತಮುತ್ತ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಪರಿಪೂರ್ಣಗೊಳಿಸಿರುವ ‘ರಮ್ಮಿ ಆಟ’  ಟೀಂ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದಿರುವುದೂ ಅಚ್ಚರಿ.

ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಪ್ರಭು ಎಸ್.ಆರ್‌ ಸಂಗೀತದ ಥಳುಕು, ರಾಘವ ಸೂರ್ಯ ಹಾಗೂ ಸಯ್ಯದ್ ಇರ್ಫಾನ್. ವಿನ್ಯಾ ಶೆಟ್ಟಿ, ಸ್ನೇಹ ರಾವ್, ಅಭಿ ಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್‌ ಮತ್ತಿತರರ ತಾರಾಗಣದಕ್ಕೆ ಆಕರ್ಷಣೆ ತುಂಬಿದೆ.

‘ರಮ್ಮಿ ಆಟ’ ರಾಜ್ಯಾದ್ಯಂತ ಪ್ರದರ್ಶನ ಮೂಲಕ ಆನ್ ಲೈನ್ ಗೇಮ್ ಕುರಿತಂತೆ ಯುವ ಸಮೂಹಗಳಲ್ಲಿ ಜಾಗೃತಿ ಮೂಡಿಸುತ್ತದೆ ಎಂಬ ವಿಶ್ಲೇಷಣೆ ವಿಮರ್ಶಕರದ್ದು. ಹಾಗಾಗಿ ಈ ಸಿನಿಮಾ ಯಶಸ್ಸು ಕಾಣಲಿದೆ ಎಂಬ ವಿಶ್ವಾಸವನ್ನು ರಾಘವ ಸೂರ್ಯ ಅಭಿಮಾನಿಗಳ ಬಳಗದ ಪ್ರಮುಖರು ವ್ಯಕ್ತಪಡಿಸಿದ್ದಾರೆ.