
ಬೆಂಗಳೂರು: ಬೆಂಗಳೂರಿನ ಸಿಎಸ್ಐ ಟ್ರಿನಿಟಿ ಚರ್ಚ್ ಆವರಣದಲ್ಲಿ ‘ಲುಮಾರಾ ಬಾರ್ ಮತ್ತು ಕಿಚನ್’ ವಿವಾದ ಇದೀಗ ಲೋಕಾಯುಕ್ತ ಅಂಗಳ ಪ್ರವೇಶಿಸಿದೆ.
ಚರ್ಚ್ ಆವರಣದಲ್ಲಿ ನಿಯಮ ಬಾಹಿರವಾಗಿ ಮದ್ಯದ ಬಾರ್ ತೆರೆಯಲಾಗಿದೆ. ಇದರಿಂದಾಗಿ ಧಾರ್ಮಿಕ ಭಾವನೆ, ಸಾರ್ವಜನಿಕ ನೈತಿಕತೆ ಮತ್ತು ಕೋಮು ಸಾಮರಸ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ಗ್ನಾನ ರುಬಾನ್ ಎಂಬವರು ರಾಜ್ಯ ಸರ್ಕಾರ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೂ ಸಕ್ಷಮ ಪ್ರಾಧಿಕಾರಗಳು ಕ್ರಮವಹಿಸದ ಹಿನ್ನೆಲೆಯಲ್ಲಿ ಮಾರ್ಚ್ 23ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಚರ್ಚ್ ಆವರಣದಲ್ಲಿ ನಿಯಮ ಉಲ್ಲಂಘಿಸಿ ಮದ್ಯದ ಬಾರ್ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಇಲಾಖೆಗಳ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನ್ಯಾಯಾಲಯದ ಆದೇಶವನ್ನೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಬಾರ್ ವಿವಾದ ಬಗ್ಗೆ ಅನೇಕ ಬಾರಿ ದೂರುಗಳು ಸಲ್ಲಿಕೆಯಾದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ದೂರುದಾರರು, ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಈವರೆಗೆ ಬಾರ್ ವಿರುದ್ಧ ವಿರುದ್ಧ ನಡೆಯುತ್ತಿದ್ದ ಚರ್ಚ್ ಭಕ್ತರ ಹೋರಾಟ ಇದೀಗ ಅಧಿಕಾರಿಗಳ ವಿರುದ್ದದ ಹೋರಾಟದತ್ತ ತಿರುಗಿದೆ.
