Saturday, December 6

ಸಂವಿಧಾನಿಕ ಹುದ್ದೆಯಲ್ಲಿಲ್ಲದ ಮಹದೇವಪ್ಪನ ಮೊಮ್ಮಗನಿಗೆ ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ; ವ್ಯಾಪಕ ಆಕ್ರೋಶ

ಬೆಂಗಳೂರು: ಸಂವಿಧಾನದ ಹೆಸರಲ್ಲಿ ಜನರನ್ನು ಯಾಮಾರಿಸುತ್ತಿರುವ ಕಾಂಗ್ರೆಸ್ ಅಸಂವಿಧಾನಿಕ ನಡೆಗಳ ಬಗ್ಗೆ ಪ್ರತಿಪಕ್ಷ ಜೆಡಿಎಸ್ ಆಕ್ರೋಶ ಹೊರ ಹಾಕಿದೆ.

ಸಚಿವ ಮಹದೇವಪ್ಪ ಮೊಮ್ಮಗನಿಗಾಗಿ ನಾಡಹಬ್ಬ ದಸರಾ ಪರೇಡ್’ನಲ್ಲಿ ಸಾಂವಿಧಾನಿಕ ಹುದ್ದೆ ದುರ್ಬಳಕೆ ಮಾಡಿಕೊಂಡಿರುವುದು ಸಂವಿಧಾನಕ್ಕೆ ಮಾಡಿರುವ ಅಪಚಾರ.‌ ಸಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಮಹದೇವಪ್ಪನ ಮೊಮ್ಮಗನನ್ನು ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಜೆಡಿಎಸ್ ಹೇಳಿದೆ.

ದಸರಾ ಉತ್ಸವ ಜಂಬೂ ಸವಾರಿ ವೀಕ್ಷಿಸಲು 6,500 ರೂ. ಕೊಟ್ಟು ಗೋಲ್ಡನ್ ಪಾಸ್ ಖರೀದಿಸಿದ್ದ ಜನಸಾಮಾನ್ಯರಿಗೆ ಪ್ರವೇಶ ನೀಡದ ಜಿಲ್ಲಾಡಳಿತ ಮತ್ತು ಪೊಲೀಸರು ‌ಕಾಂಗ್ರೆಸ್ ನಾಯಕರ ಮಕ್ಕಳಿಗೆ ರಾಜ ಮರ್ಯಾದೆ ನೀಡಿರುವುದು ನಾಚಿಕೆಗೇಡು ಎಂದು ಜೆಡಿಎಸ್ ಪಕ್ಷ ಸಾಮಾಜಿಕ ಮಾಧ್ಯಮ ‘X’ನಲ್ಲಿ ಹೇಳಿದೆ.

ಹಿಂದೆ ವಿಧಾನಸೌಧ ಮುಂದೆ ನಡೆದಿದ್ದ RCB ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತನ್ನ ಮೊಮ್ಮಗನನ್ನು ವೇದಿಕೆ ಮೇಲೆ ಕೂರಿಸಿ ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆಸಿಕೊಂಡು ಅಂಧಾ ದರ್ಬಾರ್ ನಡೆಸಿದ್ರು. ಸಂವಿಧಾನದ ಪುಸ್ತಕ ಹಿಡಿದರಷ್ಟೇ ಸಾಲದು, ಸಂವಿಧಾನಕ್ಕೆ ಗೌರವ ಕೊಟ್ಟು, ಅದನ್ನು ಆಡಳಿತದಲ್ಲಿಯೂ ಪಾಲಿಸುವುದನ್ನು ಕಲಿಯಿರಿ ಎಂದು ಜೆಡಿಎಸ್ ಪಕ್ಷ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.