
ಬೆಂಗಳೂರು: ತಮ್ಮ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪಾರ್ಹ ವೀಡಿಯೊ ವೈರಲ್ ಮಾಡಿದೆ ಎಂದು ಪೊಲೀಸರಿಗೆ ದೂರು ನೀಡಿರುವ ವಿಪಕ್ಷ ನಾಯಕ ಆರ್.ಅಶೋಕ್, ತಮ್ಮ ಸ್ಥಾನಮಾನಕ್ಕೆ ಕಾಂಗ್ರೆಸ್ ಚ್ಯುತಿ ತರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ವಿಪಕ್ಷ ನಾಯಕ ಅಶೋಕ್ ಅವರಿಗೆ ‘ವಿಶೇಷ ಸ್ಥಾನಮಾನದ ನಾಮಫಲಕ’ ಒದಗಿಸಬೇಕಿದೆ ಎಂದು ವ್ಯಂಗ್ಯವಾಡಿದೆ. ಈ ಸಂಬಂಧ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಸ್ಪೀಕರ್’ಗೆ ಬರೆದಿರುವ ಪತ್ರ ಗಮನಸೆಳೆದಿದೆ.
ಕರ್ನಾಟಕದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅಲಿಯಾಸ್ ಸಾಮ್ರಾಟ್ ಅಶೋಕ್ ರವರಿಗೆ ವಿಶೇಷ ಸ್ಥಾನಮಾನ ಮತ್ತು ನಾಮಫಲಕ ಒದಗಿಸಬೇಕೆಂದು ಈ ಪತ್ರದಲ್ಲಿ ರಮೇಶ್ ಬಾಬು ಉಲ್ಲೇಖಿಸಿದ್ದಾರೆ. ಕರ್ನಾಟಕದ ವಿಧಾನಸಭೆಗೆ ತನ್ನದೇ ಆದ ವಿಶೇಷವಾದ ಗೌರವವಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಅನೇಕ ಹಿರಿಯರು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವಿರೋಧ ಪಕ್ಷದ ನಾಯಕರ ಸ್ಥಾನದ ಕಾರ್ಯದ ಕಾರಣಕ್ಕಾಗಿ ಗೌರವವನ್ನೂ ಪಡೆದಿರುತ್ತಾರೆ. ಹಿರಿಯ ನಾಯಕರಾದ ಏಸ್ . ಶಿವಪ್ಪನವರು ಮೊದಲ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ತಮ್ಮ ಸ್ಥಾನ ಮತ್ತು ಗೌರವಗಳನ್ನು ಹೆಚ್ಚಿಸಿಕೊಂಡು, ಹಿರಿಮೆಯನ್ನು ಹೆಚ್ಚಿಸಿಕೊಂಡಿರುತ್ತಾರೆ. ಅದೇ ರೀತಿ ವಿರೋಧ ಪಕ್ಷದ ನಾಯಕನಾಗಿ ಎಚ್ . ಸಿದ್ವೀರಪ್ಪ, ಎಚ್ ಡಿ ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಡಿ.ದೇವರಾಜ ಅರಸ್, ಎಂ.ವಿರಪ್ಪ ಮೊಯ್ಲಿ, ಎಸ್.ಬಂಗಾರಪ್ಪ, ಕೆ.ಎಸ್.ನಾಗರತ್ನಮ್ಮ, ಡಿ.ಬಿ.ಚಂದ್ರೇಗೌಡ, ಬಿ.ಎಸ್.ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮೊದಲಾದವರು ತಮ್ಮ ಸ್ಥಾನಗಳಲ್ಲಿ ಹಿರಿಮೆ ಮತ್ತು ಗೌರವವನ್ನು ತುಂಬಿರುತ್ತಾರೆ. ಬೇರೆ ಬೇರೆ ಅವಧಿಗಳಲ್ಲಿ ಸುಮಾರು 26 ಮಂದಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಗೌರವ ಮತ್ತು ಹಿರಿಮೆಯನ್ನು ಹೆಚ್ಚಿಸಿರುತ್ತಾರೆ. ಅವರಿಗೆ ಕರ್ನಾಟಕ ಎಂದಿಗೂ ಸಹ ಗೌರವವನ್ನು ಸಲ್ಲಿಸುತ್ತದೆ.
ಹಾಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಎರಡು ದಿನಗಳ ಹಿಂದೆ ನಡೆದಂ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಗಳು ತಮಗೆ ಸರಿಯಾದ ಗೌರವವನ್ನು ನೀಡಿರುವುದಿಲ್ಲವೆಂದು ಅಲಾಪಿಸಿಕೊಂಡಿರುತ್ತಾರೆ. ವಿರೋಧ ಪಕ್ಷದ ನಾಯಕರು ತಮ್ಮ ಕಾರ್ಯವೈಖರಿಯ ಮೂಲಕ ಆ ಸ್ಥಾನಕ್ಕೆ ಹೆಚ್ಚು ಗೌರವ ಮತ್ತು ಹಿರಿಮೆಯನ್ನು ತುಂಬಬೇಕಾಗುತ್ತದೆ. ಯಾವ ಕಾರಣಕ್ಕೂ ಅಶೋಕ್ ರವರು ತಮಗೆ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಾದರು ಗೌರವ ಮತ್ತು ಆದ್ಯತೆ ಸಿಗುತ್ತಿಲ್ಲ ಎಂದು ಪದೇಪದೇ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ? ಇವರ ರಕ್ಷಣೆಗೆ ಗೌರವ ಸ್ಪೀಕರ್ ರವರು ಬರಬೇಕಾದಂತಹ ಅನಿವಾರ್ಯ ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ. ಬಹುಶಹ ಆರ್.ಅಶೋಕ್ ರವರಿಗೆ ನಾಮಪಲಕದ ಕೊರತೆ ಇರಬಹುದು!ಅಥವಾ ಅವರು ವಿರೋಧ ಪಕ್ಷದ ನಾಯಕರೆಂದು ಸಾರುವ ದಲಾಯತ್ಗಳ ಅಥವಾ ಜಮೆದಾರ್ ಗಳ ಕೊರತೆ ಇರಬಹುದು! ಇಂತಹ ಕೊರತೆಯನ್ನು ಸ್ಪೀಕರ್ ರವರು ಸರಿಪಡಿಸಬೇಕೆಂದು ನಾನು ಕರ್ನಾಟಕ ಕಾಂಗ್ರೆಸ್ ಪಕ್ಷದ ಪರವಾಗಿ ವಿನಂತಿ ಮಾಡುತ್ತೇನೆ ಎಂದು ರಮೇಶ್ ಬಾಬು ಅವರು ಸ್ಪೀಕರ್’ಗೆ ಬರೆದಿರುವ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಆರ್.ಅಶೋಕ್ ರವರು ಅವರ ನಾಮಫಲಕದ ಪ್ರದರ್ಶನಕ್ಕೆ ಅವಕಾಶವಿಲ್ಲವೆಂದು ಅವಲತ್ತುಕೊಂಡಿರಬಹುದು ಅಥವಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರಿಗೆ ಧ್ವನಿವರ್ಧಕಗಳ ಮೂಲಕ ವಿರೋಧ ಪಕ್ಷದ ನಾಯಕರು ಬರುತ್ತಿದ್ದಾರೆ ಎಂದು ಸಾರುವ ಜಮೆದಾರ್’ಗಳ ಅಥವಾ ದಲಾಯತ್’ ಗಳ ಕೊರತೆ ಇರಬಹುದು. ಹಾಗಾಗಿ ಅವರಿಗೆ ಸೂಕ್ತವಾದಂತಹ ನಾಮಫಲಕಗಳನ್ನು ಏರ್ಪಾಡು ಮಾಡಲು ಮತ್ತು ಅವಶ್ಯಕವಾದಲ್ಲಿ ಜಮೇದಾರ್ ಅಥವಾ ದಲಾಯತ್’ಗಳನ್ನ ನೀಡುವ ಮೂಲಕ ಅವರು ವಿರೋಧ ಪಕ್ಷದ ನಾಯಕರೆಂದು ಸಾರಲು ಅವಕಾಶ ನೀಡಬೇಕೆಂದು ಈ ಪತ್ರದಲ್ಲಿ ಕೋರಿದ್ದಾರೆ.
ಸಾರ್ವಜನಿಕವಾಗಿ ಅವರು ಪದೇಪದೇ ತಮಗೆ ಸಿಗಬೇಕಾದ ಗೌರವ ಮತ್ತು ಹಿರಿಮೆ ಅಧಿಕಾರಿಗಳಿಂದ ಅಥವಾ ಸಾರ್ವಜನಿಕರಿಂದ ಸಿಗುತ್ತಿಲ್ಲವೆಂದು ಅವಲತ್ತುಕೊಳ್ಳುತ್ತಿದ್ದಾರೆ. ಇದರಿಂದ ಕರ್ನಾಟಕದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದ ಘನತೆ ಮತ್ತು ಗೌರವ ಕಡಿಮೆಯಾಗುತ್ತಿದೆ. ಇದನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಅವರಿಗೆ ಅವಶ್ಯಕವಾದಂತಹ ನಾಮಫಲಕಗಳನ್ನು ಅಥವಾ ಅವರ ಹೆಸರನ್ನು ಬಿಂಬಿಸುವ ವಿಶೇಷ ಫಲಕಗಳನ್ನು ನೀಡುವುದು ಸ್ಪೀಕರ್ ಅವರು ಏರ್ಪಾಟು ಮಾಡಬೇಕೆಂದು ವಿನಂತಿ ಮಾಡುತ್ತೇನೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರು ತಮಗೆ ಸಾರ್ವಜನಿಕವಾಗಿ ಇಂತಹ ಗೌರವ ಸಿಗುತ್ತಿಲ್ಲವೆಂದು ಹೇಳಿರುವುದು ಇದು ಮೊದಲಲ್ಲ. ಅನೇಕ ಬಾರಿ ಇಂತಹ ಘಟನೆಗಳನ್ನು ಅವರು ಉಲ್ಲೇಖ ಮಾಡಿರುತ್ತಾರೆ ಮತ್ತು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಅವರ ರಕ್ಷಣೆಗೆ ಬರಬೇಕಾಗಿರೋದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅವರದೇ ಪಕ್ಷದ ನಾಯಕರು ಅವರಿಗೆ ವಿರೋಧ ಪಕ್ಷದ ನಾಯಕರೆಂದು ಗೌರವ ನೀಡುತ್ತಿಲ್ಲ ಎಂಬುದು ಅವರ ಇನ್ನೊಂದು ಮಾನಸಿಕ ವೇದನೆ ಆಗಿರುತ್ತದೆ. ಬಹುತೇಕ ಇದನ್ನು ಸರಿಪಡಿಸಲು ನಾವು ಉತ್ತರಗಳನ್ನು ಹುಡುಕಬೇಕಾದಂತ ಪರಿಸ್ಥಿತಿ ಇಂದು ನಿರ್ಮಾಣವಾಗಿರುತ್ತದೆ. ಅದೇ ಕಾರಣಕ್ಕೆ ಅವರು ಪದೇ ಪದೇ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವ ಅಥವಾ ಅಧಿಕಾರಿಗಳನ್ನು ಕೆಳಮಟ್ಟದ ಭಾಷೆ ಮೂಲಕ ಟೀಕಿಸುವ ಪ್ರವೃತ್ತಿಗೆ ಮುಂದಾಗಿರುತ್ತಾರೆ. ಈ ಮನೋವೇದನಿಗೆ ಔಷಧಿ ನೀಡುವ ಕೆಲಸವನ್ನು ನಾವೆಲ್ಲರೂ ಜೊತೆಯಾಗಿ ಮಾಡಬೇಕಾಗಿದೆ. ಕರ್ನಾಟಕ ರಾಜ್ಯದ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಪದೇಪದೇ ತಮಗೆ ವಿರೋಧ ಪಕ್ಷದ ನಾಯಕನೆಂದು ಅಧಿಕಾರಿಗಳು ಅಥವಾ ಸಾರ್ವಜನಿಕರು ಗುರುತು ಮಾಡುತ್ತಿಲ್ಲವೆಂದು ಅವಲತ್ತಕೊಳ್ಳುತ್ತಿರುವುದು ನಮ್ಮ ರಾಜ್ಯದ ರಾಜಕೀಯ ಇತಿಹಾಸಕ್ಕೆ ಒಂದು ಕಳಂಕವಾಗುತ್ತದೆ. ಸ್ಪೀಕರ್ ರವರು ವಿರೋಧ ಪಕ್ಷದ ನಾಯಕರ ಸಹಾಯಕ್ಕೆ ಬರಬೇಕಾಗಿದೆ ಎಂದು ಮಾಜಿ ಶಾಸಕರೂ ಆಗಿರುವ ರಮೇಶ್ ಬಾಬು ಹೇಳಿದ್ದಾರೆ.