ಬೆಂಗಳೂರು: ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಚಿಕಿತ್ಸಾ ವೆಚ್ಚ ಭರಿಸಲು ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಲ್ಲೂ 2 ಕೋಟಿ ರೂ.ಗಳಿಗೂ ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಬಿಬಿಎಂಪಿಯಲ್ಲಿ ಪತ್ರಕರ್ತರು ಸಾಮೂಹಿಕವಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್ ಅವರು, ಪತ್ರಕರ್ತರ ಚಿಕಿತ್ಸಾ ವೆಚ್ಚದ ಹಣವನ್ನು 5 ಪಾಲಿಕೆಗಳಲ್ಲಿ ಪ್ರತ್ಯೇಕವಾಗಿ ನೀಡುವ ಬದಲು ಜಿಬಿಎ ಮೂಲಕವೇ ನೀಡುವುದು ಸೂಕ್ತ ಎಂದರು.
ಈ ಹಿಂದೆ ಬಿಬಿಎಂಪಿಯಲ್ಲಿ ಬಜೆಟ್ ನಲ್ಲಿ ನಿಗದಿ ಮಾಡುತ್ತಿದ್ದಂತೆ ಈಗ ಎಲ್ಲಾ 5 ನಗರ ಪಾಲಿಕೆಗಳಲ್ಲೂ ಪ್ರತ್ಯೇಕವಾಗಿ ಬಜೆಟ್ ನಲ್ಲಿ ಹಣ ನಿಗದಿ ಮಾಡಿದರೆ ಅದು ದುರ್ಬಳಕೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಪತ್ರಕರ್ತರ ಚಿಕಿತ್ಸೆ ಬಳಕೆಯಾಗಬೇಕೆಂದರೆ ಏಕ ಮಾರ್ಗದಲ್ಲಿ ನೀಡುವಂತಾಗಬೇಕು ಎಂದು ಹೇಳಿದರು.
ಜಿಬಿಎ ಅನುದಾನದಲ್ಲೇ ಪತ್ರಕರ್ತರಿಗೆ ಇಂತಿಷ್ಟು ಹಣ ನಿಗದಿ ಮಾಡಿ ಅದರ ಮೂಲಕ ನಿಯಮದ ಪ್ರಕಾರ ಹಂಚಿಕೆ ಮಾಡಲಾಗುವುದು ಎಂದು ಶಿವಕುಮಾರ್ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಪತ್ರಕರ್ತರಾದ ಚಂದ್ರಶೇಖರ್, ಎನ್.ಕೆ.ಸ್ವಾಮಿ, ಗಣೇಶ್ , ಯಾಖೂಬ್, ವೆಂಕಟೇಶ್ ಪೖ, ಛಾಯಾಗ್ರಾಹಕರಾದ ಪ್ರಭು ಮತ್ತು ಹೆಚ್ಚಿನ ಮಾಧ್ಯಮದವರು ಹಾಜರಿದ್ದರು.
