
ಇಟಾನಗರ: ಶಾಸಕರು ಚುನಾವಣಾ ಲೆಕ್ಕಾಚಾರಕ್ಕಿಂತ ಸಾರ್ವಜನಿಕ ಸೇವೆಗೆ ಹೆಚ್ಚಿನ ಆದ್ಯತೆ ನೀಡಿ, ಪ್ರಜಾಪ್ರಭುತ್ವದ ಉನ್ನತ ಸಂಪ್ರದಾಯಗಳನ್ನು ಎತ್ತಿಹಿಡಿಯಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಅರುಣಾಚಲ ಪ್ರದೇಶ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಶಾಸಕಾಂಗದ ಕಾರ್ಯಚಟುವಟಿಕೆಗಳು ‘ರಾಷ್ಟ್ರ ಪ್ರಥಮ’ ತತ್ವ ಹಾಗೂ ‘ವಿಕ್ಷಿತ ಭಾರತ@2047’ ಗುರಿಯಿಂದ ಮಾರ್ಗದರ್ಶಿಸಲ್ಪಡಬೇಕು ಎಂದು ಕರೆ ನೀಡಿದರು.
ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ರಾಧಾಕೃಷ್ಣನ್, ಆರೋಗ್ಯಕರ ಚರ್ಚೆ ಮತ್ತು ರಚನಾತ್ಮಕ ಸಂವಾದಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ ಎಂದರು.
“ಚರ್ಚೆ, ಸಂವಾದ ಅಥವಾ ಅಡ್ಡಿಪಡಿಸುವಿಕೆ ಕೂಡ ಅಂತಿಮವಾಗಿ ನಿರ್ಧಾರಕ್ಕೆ ದಾರಿ ಮಾಡಿಕೊಡಬೇಕು” ಎಂದು ಹೇಳಿದ ಅವರು, ಶಾಸಕರು ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯ ವೇಳೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾರ್ವಜನಿಕ ನೀತಿ ಮತ್ತು ಕ್ಷೇತ್ರಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದರು.

ಚುನಾವಣೆಯಲ್ಲಿ ಮತಗಳ ಮೂಲಕ ಗೆಲುವು ಸಾಧಿಸಬಹುದು. ಆದರೆ ಜನರ ಗೌರವ ಮತ್ತು ವಿಶ್ವಾಸವನ್ನು ಸಮರ್ಪಿತ ಸಾರ್ವಜನಿಕ ಸೇವೆಯಿಂದ ಮಾತ್ರ ಗಳಿಸಲು ಸಾಧ್ಯ ಎಂದು ಹೇಳಿದರು.
ಅರುಣಾಚಲ ಪ್ರದೇಶದ ಕಾರ್ಯತಂತ್ರದ ಮಹತ್ವವನ್ನು ಪ್ರಸ್ತಾಪಿಸಿದ ಅವರು, ರಾಜ್ಯದ ಜನರು ದೇಶದ ಗಡಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು. ಭಾರತದ ಭದ್ರತೆಯೊಂದಿಗೆ ಅರುಣಾಚಲದ ಗಡಿ ರಕ್ಷಣೆ ನಿಕಟವಾಗಿ ಸಂಬಂಧಿಸಿದೆ ಎಂದು ತಿಳಿಸಿದರು.
ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಶಕ್ತಿ. ಸಂವಿಧಾನ, ‘ರಾಷ್ಟ್ರ ಪ್ರಥಮ’ದ ಆಶಯ ಹಾಗೂ 2047ರ ವಿಕ್ಷಿತ ಭಾರತ ಗುರಿ ದೇಶವನ್ನು ಒಗ್ಗೂಡಿಸುತ್ತಿವೆ ಎಂದರು.
ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಉಲ್ಲೇಖಿಸಿದ ಅವರು, ಅರುಣಾಚಲ ಪ್ರದೇಶದ ರಸ್ತೆ ಮೂಲಸೌಕರ್ಯ, ಕೃಷಿ, ಶಿಕ್ಷಣ ಹಾಗೂ ತಲಾ ಆದಾಯದ ಪ್ರಗತಿಯನ್ನು ಶ್ಲಾಘಿಸಿದರು.
ವಿಕ್ಷಿತ ಅರುಣಾಚಲ ಪ್ರದೇಶವಿಲ್ಲದೆ ವಿಕ್ಷಿತ ಭಾರತ ನಿರ್ಮಾಣ ಸಾಧ್ಯವಿಲ್ಲ. ಅಭಿವೃದ್ಧಿ ಎಲ್ಲರನ್ನು ಒಳಗೊಂಡಿರಬೇಕು ಹಾಗೂ ಬುಡಕಟ್ಟು ಮತ್ತು ಅಂಚಿನ ಸಮುದಾಯಗಳನ್ನು ಹಿಂದೆ ಬಿಡಬಾರದು ಎಂದು ಹೇಳಿದರು.
ಅರುಣಾಚಲದ ಅಪಾರ ಜಲವಿದ್ಯುತ್ ಸಾಮರ್ಥ್ಯವನ್ನು ಪರಿಸರ ಸಂರಕ್ಷಣೆಯೊಂದಿಗೆ ಸಮತೋಲನದಿಂದ ಬಳಸಬೇಕು. ಇದರಿಂದ ರಾಜ್ಯದ ಆದಾಯ ಹೆಚ್ಚಿಸಿ ಅಭಿವೃದ್ಧಿಗೆ ವೇಗ ನೀಡಬಹುದು ಎಂದು ರಾಧಾಕೃಷ್ಣನ್ ಹೇಳಿದರು.
ವಿಧಾನಸಭೆಯ ಸುವರ್ಣ ಮಹೋತ್ಸವ ಪೂರ್ಣಗೊಂಡಿರುವುದಕ್ಕೆ ಅಭಿನಂದಿಸಿದ ಅವರು, ಪ್ಲಾಸ್ಟಿಕ್ ಮುಕ್ತ ಪ್ರಯತ್ನಗಳು, ವಿಧಾನಸಭೆ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯದಂತಹ ಉಪಕ್ರಮಗಳನ್ನು ಶ್ಲಾಘಿಸಿದರು.
