Sunday, September 20

ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಬ್ಯಾನರ್‌ನಲ್ಲೂ ಲೂಟಿ? ಬಿಜೆಪಿ ಆರೋಪ

ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಬ್ಯಾನರ್‌ನಲ್ಲೂ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಗೃಹಲಕ್ಷ್ಮಿಯ ಎರಡು ತಿಂಗಳ ಹಣ ಎಗರಿಸಿ ₹5000 ಕೋಟಿ ಅಕ್ರಮ ಎಸಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಬ್ಯಾನರ್‌ನಲ್ಲೂ ಲೂಟಿ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಮಾರುಕಟ್ಟೆ ದರದಲ್ಲಿ ಕೇವಲ ರೂ. 350 ರಿಂದ ರೂ. 450 ಕ್ಕೆ ಲಭ್ಯವಾಗುವ ಬ್ಯಾನರ್‌ಗಳನ್ನು ಬರೋಬ್ಬರಿ ರೂ. 998 ನೀಡಿ ಮುದ್ರಿಸಿರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದಿರುವ ಬಿಜೆಪಿ, ಕನಿಷ್ಠ ಪಕ್ಷ ಒಂದು ಬ್ಯಾನರ್‌ನಲ್ಲಿ ಅದರ ನೈಜ ಮುದ್ರಣ ದರಕ್ಕಿಂತಲೂ ಹೆಚ್ಚಿನ ದರವನ್ನು ಲೂಟಿ ಮಾಡಲಾಗುತ್ತಿದೆ ಎಂದು ದೂರಿದೆ.

ಸಚಿವ ಸಂಪುಟದಲ್ಲಿ ಭ್ರಷ್ಟರು ತುಂಬಿ ತುಳುಕಾಡುತ್ತಿದ್ದರೂ ನಿಮ್ಮ ಮೌನದ ಹಿಂದಿನ ಕಾರಣವೇನು? ನಿಮಗೂ ಪಾಲು ಬರುತ್ತಿದೆಯೇ? ಎಂದು ಪ್ರಶ್ನಿಸಿ X ನಲ್ಲಿ ಬಿಜೆಪಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.