
ಬೆಂಗಳೂರು: ಆನೇಕಲ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಯೋಜನೆಯ ಹಿಂದೆ ಜಮೀನಿನ ಬೆಲೆ ಹೆಚ್ಚಿಸಿ ಕಮಿಶನ್ ಪಡೆಯುವ ಉದ್ದೇಶವಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka) ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಪರಿಸರವಾದಿಗಳ ವಿರೋಧದ ನಡುವೆಯೂ ಸರ್ಕಾರ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಿದರು.
“ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂ (M. Chinnaswamy Stadium) ವರ್ಷಕ್ಕೆ ಕೇವಲ ನಾಲ್ಕೈದು ಬಾರಿ ಮಾತ್ರ ಬಳಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದ ಅಗತ್ಯವೇನು?” ಎಂದು ಅಶೋಕ್ ಪ್ರಶ್ನಿಸಿದರು.
ಕ್ರೀಡಾಂಗಣದ ಸುತ್ತಮುತ್ತ ಜಮೀನಿನ ಬೆಲೆ ಹೆಚ್ಚಿಸಿ ಮಾರಾಟ ಮಾಡುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ. ಆನೇಕಲ್ನ ಯಾವುದೇ ಕ್ರೀಡಾಪಟು ಸರ್ಕಾರದ ಬಳಿ ಮನವಿ ಮಾಡಿಲ್ಲ. ಏಕಾಏಕಿ ಯೋಜನೆ ಘೋಷಿಸಿರುವುದು ಹಣ ಸಂಪಾದನೆಗಾಗಿ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣವನ್ನು ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ನಿರ್ಮಿಸಲಾಗಿತ್ತು. ಆದರೆ ಈಗ ಅಲ್ಲಿ ಹೊಸಬರಿಗೆ ಅವಕಾಶವಿಲ್ಲ, ಕೋಟ್ಯಂತರ ರೂಪಾಯಿ ಆದಾಯ ತರುವ ಐಪಿಎಲ್ ಪಂದ್ಯಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಮಾತನಾಡಿದ ಅಶೋಕ್, ಕೇಂದ್ರ ಸರ್ಕಾರಕ್ಕೆ ಇದರಿಂದ ಹೆಚ್ಚುವರಿ ತೆರಿಗೆ ಆದಾಯ ಬರುವುದಿಲ್ಲ. ಆದರೆ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸುಮಾರು 7 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆಯಾಗಿರುವುದರಿಂದ ತೈಲ ಕಂಪನಿಗಳು ದರ ಹೆಚ್ಚಳ ಮಾಡಿವೆ. ಯುದ್ಧ ಪರಿಸ್ಥಿತಿಯಿಂದ ಅನೇಕ ದೇಶಗಳಲ್ಲಿ ಇಂಧನ ದರ ಏರಿಕೆಯಾಗಿದೆ. ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ತೆರಿಗೆಯಲ್ಲಿ ಕಡಿತ ಮಾಡಲಿ ಎಂದು ಆಗ್ರಹಿಸಿದರು.
ಚಿತ್ರನಟ ಕಮಲ್ ಹಾಸನ್ (Kamal Haasan) ದೇಶದ ಕಷ್ಟಕಾಲದಲ್ಲಿ ಸಹಕಾರ ನೀಡಬೇಕೆಂದು ಹೇಳಿರುವುದನ್ನು ಉಲ್ಲೇಖಿಸಿದ ಅಶೋಕ್, “ಡಿಎಂಕೆ ಪಕ್ಷಕ್ಕೆ ಬುದ್ಧಿ ಬಂದರೂ ಕಾಂಗ್ರೆಸ್ಗೆ ಇನ್ನೂ ಬಂದಿಲ್ಲ” ಎಂದು ವಾಗ್ದಾಳಿ ನಡೆಸಿದರು.
