Wednesday, July 29

ಪ್ರವಾಹಕ್ಕೆ ಅಸ್ಸಾಂನ 622 ಗ್ರಾಮಗಳು ತತ್ತರ, ಸಂಕಷ್ಟದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಹಂತಹಂತವಾಗಿ ಸುಧಾರಿಸುತ್ತಿದ್ದರೂ, ಮೇಲಿನ ಅಸ್ಸಾಂನ ಏಳು ಜಿಲ್ಲೆಗಳಲ್ಲಿ ಇನ್ನೂ 5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ತಿಳಿಸಿದೆ.

ಎಎಸ್‌ಡಿಎಂಎ ಮಾಹಿತಿ ಪ್ರಕಾರ, ಶಿವಸಾಗರ್, ಚರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ಸೋನಿತ್ಪುರ್ ಹಾಗೂ ಕಾಮರೂಪ್ (ಮೆಟ್ರೋ) ಜಿಲ್ಲೆಗಳ 622 ಗ್ರಾಮಗಳ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಸುಮಾರು 45,342 ಹೆಕ್ಟೇರ್ ಕೃಷಿ ಭೂಮಿ ಇನ್ನೂ ನೀರಿನಲ್ಲಿ ಮುಳುಗಿದ್ದು, ರೈತರಿಗೆ ಭಾರೀ ನಷ್ಟ ಉಂಟಾಗಿದೆ.

ಗೋಲಾಘಾಟ್ ಜಿಲ್ಲೆಯ ನುಮಾಲಿಗಢದಲ್ಲಿ ಧನ್ಸಿರಿ (ದಕ್ಷಿಣ) ನದಿ ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇತರ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ. ಆದರೆ ಈ ವರ್ಷದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

ಚರೈಡಿಯೊ ಜಿಲ್ಲೆಯಲ್ಲಿ ಅತಿ ಹೆಚ್ಚು 1.88 ಲಕ್ಷಕ್ಕೂ ಅಧಿಕ ಜನರು ಪ್ರವಾಹದ ಪರಿಣಾಮ ಎದುರಿಸುತ್ತಿದ್ದು, ಶಿವಸಾಗರ್ ಹಾಗೂ ಜೋರ್ಹತ್ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.

ಪ್ರವಾಹ ಸಂತ್ರಸ್ತರಿಗಾಗಿ 90ಕ್ಕೂ ಹೆಚ್ಚು ಪರಿಹಾರ ಶಿಬಿರಗಳು ಹಾಗೂ ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾವಿರಾರು ಮಂದಿ ಆಶ್ರಯ ಪಡೆದಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ 67 ದೋಣಿಗಳ ಮೂಲಕ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೀಡಿತ ಪ್ರದೇಶಗಳಲ್ಲಿ ಆಹಾರ ಧಾನ್ಯ, ಕುಡಿಯುವ ನೀರು, ಔಷಧಿ, ಶಿಶು ಆಹಾರ, ಟಾರ್ಪಾಲಿನ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದ್ದು, ಪರಿಸ್ಥಿತಿಯ ಮೇಲೆ ಎಎಸ್‌ಡಿಎಂಎ ನಿರಂತರ ನಿಗಾ ವಹಿಸಿದೆ. ಜಿಲ್ಲಾಡಳಿತಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳನ್ನು ಮುಂದುವರಿಸಲಾಗಿದೆ.