Tuesday, June 16

ಶಹಪುರ ಬಳಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ

ಯಾದಗಿರಿ: ಶಹಾಪುರ ಬಳಿ ಸಾರಿಗೆ ಬಸ್ ಮತ್ತು ಬುಲೆರೊ ನಡುವೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮದ್ದರಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ‌ ಈ ಅಪಘಾತ ಸಂಭವಿಸಿದೆ. ಮೃತರನ್ನು 50 ವರ್ಷದ ಸೋಮವ್ವ, 55 ವರ್ಷದ ತಂಗಮ್ಮ, 30 ವರ್ಷದ ಶರಣಪ್ಪ, 19 ವರ್ಷದ ಸುನೀತಾ ಎಂದು ಗುರುತಿಸಲಾಗಿದೆ.

ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಧಾರ್ಮಿಕ ಕಾರ್ಯಕ್ರಮದಲ್ಲಿ‌ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಇವರಿದ್ದ ವಾಹನ ಮಾರ್ಗ ಮಧ್ಯೆ ಅಫಘಾತಕ್ಕೀಡಾಗಿದೆ.

ಯಾದಗಿರಿ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.