Friday, May 1

ಕರ್ನಾಟಕದಲ್ಲಿ 2024-25ರ ಹಿಂಗಾರು ಬೆಳೆ ಕಡಲೆಗೆ ಬೆಂಬಲ ಬೆಲೆ; ಕೇಂದ್ರದ ಅನುಮತಿ

ನವದೆಹಲಿ: ಕರ್ನಾಟಕ ಸರ್ಕಾರದ ಪ್ರಸ್ತಾವನೆಯಂತೆ ಕರ್ನಾಟಕದಲ್ಲಿ 2024-25 ರ ರಾಬಿ ಋತುವಿನಲ್ಲಿ ( ಹಿಂಗಾರು ಬೆಳೆ) ಬೆಳೆದ ಕಡಲೆಯನ್ನು ಬೆಂಬಲ ಬೆಲೆ ಯೋಜನೆಯಡಿ Price Support Scheme (PSS) ಖರೀದಿಗೆ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ಅನುಮತಿ ನೀಡಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದಲ್ಲಿ ಕಡಲೆ ಬೆಳೆದ ರೈತರ ಪರಿಸ್ಥಿತಿ ಅರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತ ದೃಷ್ಟಿಯಿಂದ ರೈತಪರ ನಿರ್ಣಯ ತೆಗೆದುಕೊಂಡಿದೆ ಎಂದು ತಿಳಿಸಿದ್ಫ್ದಾರೆ.

ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ msp ಅಡಿಯಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿದ್ದು ರಾಜ್ಯ ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ನಮೂದಿಸಿದಂತೆ 96,498 ಮೆಟ್ರಿಕ್ ಟನ್ ಗುಣಮಟ್ಟದ ಕಡಲೆ ಕಾಳನ್ನು ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದವರು ತಿಳಿಸಿದ್ದಾರೆ.

ಈಗ ಜಿಲ್ಲಾವಾರು 90 ದಿನದೊಳಗಾಗಿ‌ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರೈತರಿಂದ ಖರೀದಿ ಮಾಡಿ, ರೈತರಿಗೆ ಹಣತಲುಪವಂತೆ ಮಾಡುವದು ರಾಜ್ಯ ಸರ್ಕಾರದ ಜವಾಬ್ದಾರಿ ಆಗಿದ್ದು, ಈ ಕೂಡಲೆ ಈ ನಿಟ್ಟಿನಲ್ಲಿ ಅವರು ಕಾರ್ಯತತ್ಪರಾಗಬೇಕಾಗಿದೆ. ರಾಜ್ಯ ಸರ್ಕಾರವು ತಕ್ಷಣವೇ ರಾಜ್ಯದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಪ್ರಕ್ರಿಯೇಗೆ ಚಾಲನೆ ನೀಡಬೇಕೆಂದು ಪ್ರಲ್ಹಾದ್ ಜೋಶಿ ಸಲಹೆ ನೀಡಿದ್ದಾರೆ.

ರಾಜ್ಯದ ರೈತರ ಸಮಸ್ಯೆಗೆ ಸತತವಾಗಿ ಸ್ಪಂದಿಸಿ ಬೆಳೆಗಳ ಖರೀದಿಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಪ್ರಲ್ಹಾದ್ ಜೋಶಿ, ‘ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರ – ಸದಾ ರೈತರ ಪರ ಸರ್ಕಾರ’ವಾಗಿದೆ ಎಂದಿದ್ದಾರೆ.