Tuesday, June 24

ಜಲಜೀವನ್ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರದ ಸರ್ಕಾರ: ಸಿ.ಟಿ.ರವಿ ಆಕ್ರೋಶ

ಬೆಂಗಳೂರು: ಜಲಜೀವನ್ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿ.ಟಿ.ರವಿ ಅವರು ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಿಡಿಕಾರಿದರು.

ಜಲಜೀವನ್ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲಎಂದು ವಾಗ್ದಾಳಿ ನಡೆಸಿದ ಅವರು, 26,592 ಗ್ರಾಮಗಳು ರಾಜ್ಯದಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಿ,‌ ನೀರು ಸರಬರಾಜು ಆಗುತ್ತಿರುವ ಗ್ರಾಮಗಳ ಸಂಖ್ಯೆ 4,675. ಇನ್ನೂ 21,000 ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸದನದ ಗಮನಸೆಳೆದರು.

ಆಗಿರುವ ಕಾಮಗಾರಿಯೂ ಸಮರ್ಪಕವಾಗಿ ನಡೆದಿಲ್ಲ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ತಾಪಮಾನದ ನಡುವೆ ಅಂತರ್ಜಲ ಕುಸಿಯುತ್ತಿದೆ. ಜನರು ಜಲಜೀವನ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರು ದೊರಕುವ ಭರವಸೆಯಲ್ಲಿದ್ದಾರೆ ಎಂದ ಸಿ.ಟಿ.ರವಿ, ರಾಜ್ಯದಲ್ಲಿ ಈ ಯೋಜನಾ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು ದುಃಖದ ಸಂಗತಿ. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನ ನಮ್ಮಲ್ಲಿ ದೂರುತ್ತಿದ್ದಾರೆ ಎಂದು ಪರಿಸ್ಥಿಯನ್ನು ತೆರೆದಿಟ್ಟರು.

ಸರ್ಕಾರ ಈ ಕೂಡಲೇ ಒಂದು ಕಮಿಟಿ ಮಾಡಿ ಸೋಶಿಯಲ್ ಅಡಿಟ್ ಮಾಡುವಂತಹ ಕೆಲಸ ಅತಿ ಶೀಘ್ರವಾಗಿ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.