Wednesday, June 25

ಅನಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಬಿಜೆಪಿ ಶಾಸಕರ ಅಮಾನತು: ಬಿಜೆಪಿ ಆಕ್ರೋಶ

ಬೆಂಗಳೂರು: ಅನಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಬಿಜೆಪಿಯ 18 ಮಂದಿ ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅನಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಬಿಜೆಪಿಯ 18 ಮಂದಿ ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದ್ದು, ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಸಮುದಾಯದ ಹಿರಿಯ ಸಚಿವರೊಬ್ಬರು ನನಗೆ ರಕ್ಷಣೆ ಕೊಡಿ ಎಂದು ಸದನದಲ್ಲಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡುತ್ತಿರುವ ಸಿಎಂ
ಸಿದ್ದರಾಮಯ್ಯ ಸರ್ಕಾರ, ಯಾರ ಒತ್ತಡದಲ್ಲಿದೆ? ಯಾರ ಒತ್ತಡಕ್ಕೆ ಮಣಿದು ತನಿಖೆಗೆ ಆದೇಶ ಮಾಡಲು ಮೀನಾಮೇಷ ಎಣಿಸುತ್ತಿದೆ? ಎಂದು ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್’ನಲ್ಲಿ ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಒಬ್ಬ ಹಿರಿಯ ಶಾಸಕರು, ಹಾಲಿ ಸಚಿವರಿಗೇ ರಕ್ಷಣೆ ಇಲ್ಲದಮೇಲೆ, ಇನ್ನು ನಾಡಿನ ಜನಸಾಮಾನ್ಯರ ಕಥೆ ಏನು? ಇದನ್ನು ಪ್ರಶ್ನೆ ಮಾಡುವುದು ವಿಪಕ್ಷಗಳ ಕರ್ತವ್ಯ ಅಲ್ಲವೇ? ಸರ್ಕಾರವನ್ನು ಪ್ರಶ್ನೆ ಮಾಡಿದರೆ ಸದನದಿಂದ ಅಮಾನತು ಮಾಡುವುದು ನ್ಯಾಯ? ಇದು ಕೇವಲ ಶಾಸಕರಿಗೆ ಮಾತ್ರವಲ್ಲ, ಅವರನ್ನು ಆರಿಸಿ ಕಳಿಸಿರುವ ಮತದಾರರಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಕೂಡ ಮಾಡಿರುವ ಅವಮಾನ ಎಂದವರು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವದ ನಡುವೆ ಸಂಘರ್ಷ ಆರಂಭಗೊಂಡಿದೆ. ಈ ಸರ್ವಾಧಿಕಾರಿ ಧೋರಣೆಗೆ ಬಿಜೆಪಿ ಜಗ್ಗುವುದಿಲ್ಲ ಎಂದಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾಡಿನ ದಲಿತರು, ಹಿಂದುಳಿದವರು ಸೇರಿದಂತೆ ರಾಜ್ಯದ ಏಳೂವರೆ ಕೋಟಿ ಕನ್ನಡಿಗರು ಒಂದಾಗಬೇಕಿದೆ ಎಂದವರು ಕರೆಕೊಟ್ಟಿದ್ದಾರೆ.