
ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಸೇವೆ ನೀಡುತ್ತಿರುವ ಸುಮಾರು 3 ಲಕ್ಷಕ್ಕೂ ಅಧಿಕ ನೌಕರರು ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ – ಖಾಯಂ ಅಲ್ಲದ ಸಿಬ್ಬಂದಿಗೆ (KASS–NPE)’ಯನ್ನು ಅನುಮೋದಿಸಿದೆ.
2025–26ನೇ ಸಾಲಿನ ಬಜೆಟ್ನಲ್ಲಿ ಘೋಷಣೆಗೊಂಡಿದ್ದ ಈ ಯೋಜನೆಗೆ ಸಂಬಂಧಪಟ್ಟಂತೆ ಸರಕಾರವು ಈಚೆಗೆ ಆದೇಶ ಹೊರಡಿಸಿದ್ದು, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (AB-ArK) ಯೋಜನೆಯ ಸ್ವರೂಪದಲ್ಲಿಯೇ ಹೊಸ ಯೋಜನೆ ಜಾರಿಗೆ ಬರುತ್ತದೆ.
ಯೋಜನೆಯ ಅಂಶಗಳು ಹೀಗಿವೆ:
- ಮಾಸಿಕ ಆದಾಯ ₹21,000ರೊಳಗಿನ ನೌಕರರು ತಿಂಗಳಿಗೆ ₹100 ವಂತಿಕೆ ಪಾವತಿಸಿದರೆ, ಸರ್ಕಾರವೂ ₹100 ಸೇರಿಸಿ ವಾರ್ಷಿಕ ವೆಚ್ಚದ ಅರ್ಧವನ್ನು ಭರಿಸುತ್ತದೆ.
- ₹21,000ಕ್ಕಿಂತ ಹೆಚ್ಚು ಆದಾಯವಿರುವ ಸಿಬ್ಬಂದಿಗೆ ಸರ್ಕಾರ ₹60 ಕೊಡುಗೆ ನೀಡುತ್ತಿದ್ದು, ಸಿಬ್ಬಂದಿ ₹140 ಪಾವತಿಸಬೇಕಾಗುತ್ತದೆ. ಇದು ವಾರ್ಷಿಕ ವೆಚ್ಚದ 30% ಪಾಲಾಗುತ್ತದೆ.
- ಯೋಜನೆಯಡಿ ವಾರ್ಡ್ ಶ್ರೇಣಿಯ ಚಿಕಿತ್ಸೆಗೆ ಮಾತ್ರ ನಗದು ರಹಿತ ಸೌಲಭ್ಯ ಲಭ್ಯವಾಗುತ್ತಿದ್ದು, ಖಾಸಗಿ ಕೊಠಡಿಗೆ ಪಾವತಿ ನೌಕರರ ಹೊಣೆಗೆಯಲ್ಲಿರುತ್ತದೆ.
- ಪಾಲುದಾರಿಕೆ ಸಂಸ್ಥೆಗಳು (ಸರ್ಕಾರಿ ಇಲಾಖೆ/ನಿಗಮ/ಮಂಡಳಿಗಳು) ತಮ್ಮ ಸಿಬ್ಬಂದಿಯ ಮಾಹಿತಿಯನ್ನು ರಾಜ್ಯ ಆರೋಗ್ಯ ವ್ಯವಸ್ಥಾಪನಾ ಟ್ರಸ್ಟ್ (SAST)ಗೆ ಒದಗಿಸಬೇಕಾಗುತ್ತದೆ.
- ಇದೇ ಆ.31ರೊಳಗೆ ಪ್ರಾರಂಭಿಕ ಪಟ್ಟಿ ಸಲ್ಲಿಸಬೇಕೆಂದು ಸರ್ಕಾರ ಸೂಚನೆ ನೀಡಿದ್ದು, ಮುಂದಿನ ವರ್ಷಗಳಿಂದ ಪ್ರತಿವರ್ಷ ಮಾ.31ರೊಳಗೆ ಪಟ್ಟಿ ನವೀಕರಿಸಬೇಕು.
- ನೌಕರರಿಂದ ಸಂಗ್ರಹಿಸಲಾಗುವ ವಂತಿಕೆಯನ್ನು ಪಾಲುದಾರಿಕೆ ಸಂಸ್ಥೆಗಳೇ ಮಾಸಿಕವಾಗಿ SASTಗೆ ವರ್ಗಾಯಿಸಬೇಕಾಗಿದ್ದು, 2% ನಿರ್ವಹಣಾ ವೆಚ್ಚವನ್ನು ಸಹ ಪಾವತಿಸಬೇಕಿದೆ.
ಈ ಮೂಲಕ ಖಾಯಂ ಅಲ್ಲದ ನೌಕರರಿಗೂ ಆರೋಗ್ಯ ವಿಮೆ ಸೌಲಭ್ಯ ವಿಸ್ತರಿಸಲು ಸರ್ಕಾರ ಬದ್ಧತೆ ತೋರಿಸಿದೆ. ಈ ಯೋಜನೆಯಿಂದ ಸಾವಿರಾರು ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ನೌಕರರು ಲಾಭ ಪಡೆಯುವ ನಿರೀಕ್ಷೆಯಿದೆ.