Sunday, September 20

ಗ್ರಾಮೀಣ ಭಾಗದಲ್ಲಿ ನೀಟ್ ತರಬೇತಿಗೆ ಒತ್ತು: ಡಾ. ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಟ್ ತರಬೇತಿಯನ್ನು ನೀಡಲು ಸರ್ಕಾರ ವಿಶೇಷ ಉಪಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಹೇಳಿದರು.

ವಿಧಾನ ಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಮಾತನಾಡಿ, ನೀಟ್ ವ್ಯವಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ, ಮೂರು ಲಕ್ಷ ರೂ. ನೀಡಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ನೀಟ್ ತರಬೇತಿ ಪಡೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಆಗ ಉತ್ತರ ನೀಡಿದ ಸಚಿವ ಡಾ.ಪಾಟೀಲ್‌, ನೀಟ್ ವ್ಯವಸ್ಥೆಯಿಂದ ರಾಜ್ಯದ ಸೀಟ್‌ಗಳಿಗೆ ಯಾವ ಕೊರತೆ ಆಗಿಲ್ಲ, ಸೀಟ್‌ಗಳ ಸಂಖ್ಯೆ ಕಡಿಮೆಯಾಗಿಲ್ಲ, ನೀಟ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ನಾವು ನಿರ್ಣಯ ಮಾತ್ರ ಸ್ವೀಕರಿಸಿದ್ದೇವೆ, ಆದರೆ ಸುಪ್ರೀಂಕೋರ್ಟ್ ನೀಟ್ ವ್ಯವಸ್ಥೆಯ ಪರವಾಗಿ ತೀರ್ಪು ನೀಡಿದೆ, ಹೀಗಾಗಿ ನೀಟ್ ಪರೀಕ್ಷೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟೂ ಪರಿಣಾಮಕಾರಿಯಾದ ತರಬೇತಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.