Sunday, May 3

ದೋಹಾದಲ್ಲಿ ಕರ್ನಾಟಕ ಸಂಘದಿಂದ ಕಾರ್ಮಿಕ ದಿನಾಚರಣೆ; ‘ಕಾಯಕವೇ ಕೈಲಾಸ’ ಸಂದೇಶ

ದೋಹಾ (ಕತಾರ್): ಕರ್ನಾಟಕ ಸಂಘ ಕತಾರ್ ವತಿಯಿಂದ “ಕಾರ್ಮಿಕ ದಿನಾಚರಣೆ 2026”ನ್ನು ದೋಹಾದ ಪರ್ಲಿಂಗ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭರ್ಜರಿಯಾಗಿ ಆಚರಿಸಲಾಯಿತು. Indian Cultural Centre ಹಾಗೂ Embassy of India, Doha ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮ “ಕಾಯಕವೇ ಕೈಲಾಸ” ಎಂಬ ಘೋಷವಾಕ್ಯದೊಂದಿಗೆ ಕಾರ್ಮಿಕರ ಮಹತ್ವವನ್ನು ಎತ್ತಿಹಿಡಿದಿತು.

ಇದು ಸಂಘದ ನೂತನ ಆಡಳಿತ ಸಮಿತಿಯ ಮೊದಲ ಕಾರ್ಯಕ್ರಮವಾಗಿದ್ದು, ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಧ್ಯಕ್ಷ ಸುಬ್ರಮಣ್ಯ ಹೆಬ್ಬಗಿಲು ತಮ್ಮ ಭಾಷಣದಲ್ಲಿ “ಕಾರ್ಮಿಕರಿಗೆ ಕರ್ನಾಟಕ ಸಂಘವು ಸ್ವಗೃಹದಂತಿದೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ. ವೈಭವ್ ತಾಂಡಲೆ, ಖಾಲಿದ್ ಅಬ್ದುಲ್ ರಹ್ಮಾನ್ ಫಖ್ರೂ, ಮಣಿಕಂಟನ್ ಎ.ಪಿ., ಪಿ.ಎನ್. ಬಾಬುರಾಜನ್ ಹಾಗೂ ಫೈಸಲ್ ಅಲ್ ಹುಡಾವಿ ಉಪಸ್ಥಿತರಿದ್ದು, ಕಾರ್ಮಿಕರ ಕೊಡುಗೆ, ಸುರಕ್ಷತೆ ಹಾಗೂ ಕಲ್ಯಾಣದ ಮಹತ್ವವನ್ನು ಒತ್ತಿಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಲಹಾ ಸಮಿತಿ ಸದಸ್ಯರು ಹಾಗೂ ಕನ್ನಡಿಗರ ಪ್ರತಿನಿಧಿಗಳು ಭಾಗವಹಿಸಿ ಒಗ್ಗಟ್ಟಿನ ಸಂದೇಶ ನೀಡಿದರು. ಕಾರ್ಮಿಕರಿಗೆ ICBF ಜೀವವಿಮೆ ಸೌಲಭ್ಯ ವಿತರಿಸುವ ಜೊತೆಗೆ, ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಕೂಲರ್ ಬಾಟಲ್‌ಗಳನ್ನು ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಮಿಕರಿಗೆ ಮನೋರಂಜನೆ ನೀಡಿದವು. ಡಾ. ಕಾಂತರಾಜ್ ಆರೋಗ್ಯ ಜಾಗೃತಿ ಮೂಡಿಸಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಧನ್ಯವಾದ ಅರ್ಪಿಸಿದರು.