Tuesday, July 28

ರಾಜ್ಯದ 13 ಪ್ರಮುಖ ಯೋಜನೆಗಳಿಗೆ ಕೇಂದ್ರದ ಅನುಮೋದನೆಗೆ ಸಿಎಂ ಒತ್ತಾಯ: ನವದೆಹಲಿಯಲ್ಲಿಸಂಸದರ ಜೊತೆ ಚರ್ಚೆ

ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ನವದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿ, ಕೇಂದ್ರ ಸರ್ಕಾರದ ಅನುಮೋದನೆ ಮತ್ತು ಅನುದಾನಕ್ಕಾಗಿ ಬಾಕಿ ಇರುವ ರಾಜ್ಯದ 13 ಪ್ರಮುಖ ಯೋಜನೆಗಳು ಹಾಗೂ ವಿಧೇಯಕಗಳ ಕುರಿತು ಚರ್ಚಿಸಿದರು.

ಸಭೆಯಲ್ಲಿ 15ನೇ ಹಣಕಾಸು ಆಯೋಗದಡಿ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗಬೇಕಿರುವ ₹2,186.20 ಕೋಟಿ ಅನುದಾನ, ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಯೋಜನೆಯ ₹9,613 ಕೋಟಿ ಮೌಲ್ಯದ ಬಾಕಿ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ, ಬೆಂಗಳೂರು ಉಪನಗರ ರೈಲು ಯೋಜನೆಗೆ 153 ರೈಲ್ವೆ ಕೋಚ್‌ಗಳ ಖರೀದಿ ಅನುಮೋದನೆ, ಹಾಗೂ ಕೋಲಾರ ರೈಲ್ವೆ ಕೋಚ್ ಕಾರ್ಖಾನೆ ಯೋಜನೆ ಜಾರಿಗೊಳಿಸುವ ಕುರಿತು ಒತ್ತಾಯಿಸಲಾಯಿತು.

ಇದೇ ವೇಳೆ ಹೆಚ್‌ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸುವುದು, ಸಾಗರಮಾಲಾ 2.0 ಯೋಜನೆಯಡಿ ₹16,561 ಕೋಟಿ ಮೌಲ್ಯದ 176 ಯೋಜನೆಗಳಿಗೆ ಅನುಮೋದನೆ, ರಾಯಚೂರಿನಲ್ಲಿ AIIMS ಸ್ಥಾಪನೆ, ತೆಂಗು ಹಾಗೂ ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ₹1,438.59 ಕೋಟಿ ನೆರವು, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರಕ್ಕೆ CAMPA ಯೋಜನೆಯಡಿ ₹300 ಕೋಟಿ ಅನುದಾನ, ರಕ್ಷಣಾ ಇಲಾಖೆಯ ಭೂಮಿ ರಾಜ್ಯಕ್ಕೆ ವರ್ಗಾವಣೆ, ಬೆಂಗಳೂರು–ಮೈಸೂರು ಹಾಗೂ ಬೆಂಗಳೂರು–ಮುಂಬೈ ಹೈಸ್ಪೀಡ್ ರೈಲು ಮಾರ್ಗ, ಮತ್ತು ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕೆ ICJS 2.0 ಹಾಗೂ ASUMP ಯೋಜನೆಗಳಡಿ ಅನುದಾನ ಬಿಡುಗಡೆ ಕುರಿತ ವಿಷಯಗಳೂ ಚರ್ಚೆಗೆ ಬಂದವು.

ಸಭೆಯಲ್ಲಿ ಕೇಂದ್ರದ ಅನುಮೋದನೆ ನಿರೀಕ್ಷಿಸುತ್ತಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ (ಕರ್ನಾಟಕ ತಿದ್ದುಪಡಿ) ವಿಧೇಯಕ–2015, ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿ ತೆರಿಗೆ ವಿಧೇಯಕ–2024, ಔಷಧ ಮತ್ತು ಸೌಂದರ್ಯವರ್ಧಕ (ಕರ್ನಾಟಕ ತಿದ್ದುಪಡಿ) ವಿಧೇಯಕ–2025 ಹಾಗೂ ನೋಟರೀಸ್ (ಕರ್ನಾಟಕ ತಿದ್ದುಪಡಿ) ವಿಧೇಯಕ–2025ಗಳ ಕುರಿತು ಕೂಡ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ರಾಜ್ಯದ ಅಭಿವೃದ್ಧಿ, ಕರ್ನಾಟಕದ ಹಕ್ಕುಗಳು ಹಾಗೂ ಕನ್ನಡಿಗರ ಹಿತಾಸಕ್ತಿಗಾಗಿ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆಯಲ್ಲಿ ಮನವಿ ಮಾಡಿದರು.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿ, ಕೇಂದ್ರ ಸರ್ಕಾರದ ಬಳಿ ಬಾಕಿ ಇರುವ ರಾಜ್ಯದ ಹಿತದೃಷ್ಟಿಯ 13 ಪ್ರಮುಖ ಯೋಜನೆಗಳು ಹಾಗೂ ಅನುದಾನಗಳ ಶೀಘ್ರ ಬಿಡುಗಡೆಗಾಗಿ ಒತ್ತಡ ಹೇರುವ ನಿಟ್ಟಿನಲ್ಲಿ ಚರ್ಚಿಸಿದರು. ಅನುಮೋದನೆ… pic.twitter.com/wm5e1HkF74

— CM of Karnataka (@CMofKarnataka) July 27, 2026