
ಬೆಂಗಳೂರು: ಕಲಬೆರಕೆ ಹಾಗೂ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟದ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ.
ರಾಜ್ಯಾದ್ಯಂತ ಅಂಗಡಿಗಳು ಹಾಗೂ ಮಾರಾಟ ಮಳಿಗೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಲೇಬಲ್, ಉತ್ಪಾದನಾ ದಿನಾಂಕ, ತಯಾರಕರ ವಿವರ ಹಾಗೂ ಸೂಕ್ತ ಲೈಸೆನ್ಸ್ ಇಲ್ಲದೆ ಮಾರಾಟವಾಗುವ ಎಣ್ಣೆಯ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ.

ಕಲಬೆರಕೆ ಶಂಕೆ ಇರುವ ಕಡೆಗಳಿಂದ ಎಣ್ಣೆ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಗುಣಮಟ್ಟ ವಿಫಲವಾದರೆ ಎಣ್ಣೆ ಮಾರಾಟಕ್ಕೆ ತಡೆ ನೀಡಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಆಹಾರ ಸುರಕ್ಷತೆ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಲೂಸ್ ಎಣ್ಣೆ ಮಾರಾಟದಿಂದಾಗುವ ಅಪಾಯಗಳು ಹಾಗೂ ಸಂಪೂರ್ಣ ನಿಷೇಧದಿಂದ ಗ್ರಾಹಕರು ಮತ್ತು ವ್ಯಾಪಾರಿಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸೂಚಿಸಿದ್ದಾರೆ.
ಸಮಿತಿಯ ವರದಿ ಆಧರಿಸಿ ರಾಜ್ಯದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಲೂಸ್ ಎಣ್ಣೆಯಲ್ಲಿ ತಯಾರಿಕಾ ಮತ್ತು ಅವಧಿ ಮುಕ್ತಾಯ ದಿನಾಂಕ, ತಯಾರಕರ ವಿವರ ಹಾಗೂ FSSAI ನೋಂದಣಿ ಮಾಹಿತಿ ಲಭ್ಯವಿಲ್ಲದಿರುವುದರಿಂದ ಕಲಬೆರಕೆಯಾದರೆ ಪತ್ತೆಹಚ್ಚುವುದು ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಿಗೆ ಎಚ್ಚರಿಕೆ: ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಲೂಸ್ ಎಣ್ಣೆ ಖರೀದಿಸದೆ, ಸೀಲ್ ಮಾಡಿದ ಹಾಗೂ ಸರಿಯಾದ ಲೇಬಲ್ ಮತ್ತು FSSAI ಲೈಸೆನ್ಸ್/ನೋಂದಣಿ ಸಂಖ್ಯೆ ಹೊಂದಿರುವ ಪ್ಯಾಕೇಜ್ಡ್ ಅಡುಗೆ ಎಣ್ಣೆಯನ್ನೇ ಖರೀದಿಸುವಂತೆ ಇಲಾಖೆ ಸೂಚಿಸಿದೆ.
