
ನವದೆಹಲಿ: ದೇಶಾದ್ಯಂತ ನ್ಯಾಯಮಂಡಳಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಿಬ್ಬಂದಿ ಕೊರತೆ ನೀಗಿಸುವುದು, ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದು, ಡಿಜಿಟಲ್ ಮೂಲಸೌಕರ್ಯ ಬಲಪಡಿಸುವುದು ಹಾಗೂ ಪ್ರಕರಣಗಳ ಬಾಕಿ ಇರುವಿಕೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ರಾಜ್ಯಸಭಾ ಸಂಸದ ಬ್ರಿಜ್ ಲಾಲ್ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ, ‘ದೇಶದಲ್ಲಿ ನ್ಯಾಯಮಂಡಳಿ ವ್ಯವಸ್ಥೆಯ ಕಾರ್ಯನಿರ್ವಹಣೆಯ ವಿಮರ್ಶೆ’ ಕುರಿತ 166ನೇ ವರದಿಯನ್ನು ಆಗಸ್ಟ್ 7ರಂದು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದೆ.
ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT)ಯಲ್ಲಿ ಸದಸ್ಯರು ಹಾಗೂ ಪ್ರಮುಖ ನೋಂದಣಿ ಅಧಿಕಾರಿಗಳ ಖಾಲಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡುವಂತೆ ಸಮಿತಿ ಸೂಚಿಸಿದೆ. ಬಾಕಿ ಪ್ರಕರಣಗಳ ಹೆಚ್ಚಳ ತಡೆಯಲು ನಿಯಮಿತ ಮಾನವ ಸಂಪನ್ಮೂಲ ಮೌಲ್ಯಮಾಪನ ಹಾಗೂ ವಿಲೇವಾರಿ ಅವಧಿಯ ಮೇಲ್ವಿಚಾರಣೆಗೆ ಒತ್ತು ನೀಡಿದೆ.

ನ್ಯಾಯಮಂಡಳಿ ಆವರಣಗಳ ಆಧುನೀಕರಣ, ಐಟಿ ವ್ಯವಸ್ಥೆಗಳ ನಿಯಮಿತ ನವೀಕರಣ, ಸೈಬರ್ ಭದ್ರತಾ ಪರಿಶೀಲನೆ ಹಾಗೂ ಉತ್ತಮ ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸುವಂತೆಯೂ ಶಿಫಾರಸು ಮಾಡಿದೆ.
ರೈಲ್ವೆ ಕ್ಲೈಮ್ಸ್ ಟ್ರಿಬ್ಯುನಲ್ನಲ್ಲಿ ಸಮಯಬದ್ಧ ನೇಮಕಾತಿ, ಹೆಚ್ಚಿನ ಬಾಕಿ ಇರುವ ಪ್ರದೇಶಗಳಲ್ಲಿ ಹೆಚ್ಚುವರಿ ಪೀಠಗಳ ಸ್ಥಾಪನೆ, ಇ-ಫೈಲಿಂಗ್, ವರ್ಚುವಲ್ ವಿಚಾರಣೆ ಹಾಗೂ ನೈಜ-ಸಮಯದ ಪ್ರಕರಣಗಳ ಮೇಲ್ವಿಚಾರಣೆಗೆ ಸಮಿತಿ ಸಲಹೆ ನೀಡಿದೆ.
ಟೆಲಿಕಾಂ ವಿವಾದಗಳ ಇತ್ಯರ್ಥಕ್ಕೆ TDSAT ಅನ್ನು ಹೆಚ್ಚುವರಿ ಸದಸ್ಯರು ಹಾಗೂ ತಾಂತ್ರಿಕ ತಜ್ಞರೊಂದಿಗೆ ಬಲಪಡಿಸುವುದು, ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಮಯಬದ್ಧ ಯೋಜನೆ ರೂಪಿಸುವುದು ಮತ್ತು ಸ್ವತಂತ್ರ ಟೆಲಿಕಾಂ ಒಂಬುಡ್ಸ್ಮನ್ ವ್ಯವಸ್ಥೆ ಪರಿಗಣಿಸುವಂತೆ ಶಿಫಾರಸು ಮಾಡಿದೆ.
NGTಯಲ್ಲಿ ನ್ಯಾಯಾಂಗ ಮತ್ತು ತಜ್ಞರ ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವುದರ ಜೊತೆಗೆ, NCLTನಲ್ಲಿ ಶಾಶ್ವತ ಸಿಬ್ಬಂದಿ, ಮೀಸಲಾದ IBC ಪೀಠಗಳು, ಬಲವಾದ ಡಿಜಿಟಲ್ ವ್ಯವಸ್ಥೆ ಹಾಗೂ ದಿವಾಳಿತನ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿ ಕರೆ ನೀಡಿದೆ.
