Tuesday, June 2

ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ತಲೈವರ್ 173’ ಚಿತ್ರದ ನಿರ್ದೇಶಕರ ಕುರಿತು ಹೊಸ ಚರ್ಚೆ ಆರಂಭವಾಗಿದೆ. ನಟ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ (ಆರ್‌ಕೆಎಫ್‌ಐ) ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬಳಿಕ, ಈ ಚಿತ್ರವನ್ನು ಅವರೇ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳು ಸಿನಿ ವಲಯದಲ್ಲಿ ಹರಿದಾಡುತ್ತಿವೆ.

ಆರ್‌ಕೆಎಫ್‌ಐ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೊ ಹಂಚಿಕೊಂಡು ಅಶ್ವಥ್ ಮಾರಿಮುತ್ತು ಅವರಿಗೆ ಶುಭಾಶಯ ಕೋರಿತ್ತು. ಈ ವಿಡಿಯೊದಲ್ಲಿನ ಕೆಲವು ಸೂಚನೆಗಳು ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದ್ದು, ‘ತಲೈವರ್ 173’ ಚಿತ್ರದ ನಿರ್ದೇಶಕ ಅಶ್ವಥ್ ಅವರೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಈ ಚಿತ್ರವನ್ನು ಮೊದಲು ನಿರ್ದೇಶಕ ಸುಂದರ್ ಸಿ ನಿರ್ದೇಶಿಸಬೇಕಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಯೋಜನೆಯಿಂದ ಹಿಂದೆ ಸರಿದಿದ್ದರು. ಬಳಿಕ ನಿರ್ದೇಶಕ ಸಿಬಿ ಚಕ್ರವರ್ತಿ ಹೆಸರು ಕೇಳಿಬಂದಿದ್ದರೂ, ಅವರು ಸಹ ಯೋಜನೆಯಿಂದ ಹೊರಬಂದಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.

ಈ ಬೆಳವಣಿಗೆಗಳ ನಡುವೆ ಅಶ್ವಥ್ ಮಾರಿಮುತ್ತು ಹೆಸರು ಮುನ್ನೆಲೆಗೆ ಬಂದಿದ್ದು, ಆರ್‌ಕೆಎಫ್‌ಐ ಪೋಸ್ಟ್ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಆದರೆ ಈ ಕುರಿತು ನಿರ್ಮಾಣ ಸಂಸ್ಥೆ ಅಥವಾ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಕಮಲ್ ಹಾಸನ್ ನಿರ್ಮಿಸುತ್ತಿರುವ ಹಾಗೂ ರಜನಿಕಾಂತ್ ಅಭಿನಯಿಸಲಿರುವ ‘ತಲೈವರ್ 173’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ನಿರ್ದೇಶಕರ ಆಯ್ಕೆ ಕುರಿತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.