Saturday, July 25

ಬೆಳೆ ವಿಮೆ ಕ್ಲೇಮ್‌ಗಳಿಗೆ ತ್ವರಿತ ಇತ್ಯರ್ಥ: ಡಿಜಿಟಲ್ ಮೇಲ್ವಿಚಾರಣೆ, ವಿಳಂಬಕ್ಕೆ 12% ದಂಡ

ನವದೆಹಲಿ: ಬೆಳೆ ವಿಮಾ ಕ್ಲೇಮ್‌ಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ರೈತರಿಗೆ ಪಾರದರ್ಶಕ ಸೇವೆ ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಹಾಗೂ ಪುನರ್‌ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS) ಅಡಿಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್, ಬೆಳೆ ಕಟಾವು ಪ್ರಯೋಗಗಳು (CCE) ಹಾಗೂ YES-TECH ತಂತ್ರಜ್ಞಾನದ ಮೂಲಕ ಸಂಗ್ರಹಿಸಲಾದ ಬೆಳೆ ಇಳುವರಿ ಮಾಹಿತಿಯ ಆಧಾರದಲ್ಲಿ ವಿಮಾ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆಲಿಕಲ್ಲು ಮಳೆ, ಭೂಕುಸಿತ, ಪ್ರವಾಹ, ಮೋಡ ಸಿಡಿತ, ನೈಸರ್ಗಿಕ ಬೆಂಕಿ, ಚಂಡಮಾರುತ, ಅಕಾಲಿಕ ಮಳೆ ಹಾಗೂ ಕೊಯ್ಲಿನ ನಂತರ ಸಂಭವಿಸುವ ಬೆಳೆ ಹಾನಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವೈಯಕ್ತಿಕ ಕೃಷಿ ಆಧಾರದ ಮೇಲೆ ನಷ್ಟವನ್ನು ಅಂದಾಜಿಸಿ ಪರಿಹಾರ ನೀಡಲಾಗುತ್ತದೆ. ಈ ಮೌಲ್ಯಮಾಪನವನ್ನು ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿ ನಡೆಸಲಿದೆ.

ಕ್ಲೇಮ್‌ಗಳ ತ್ವರಿತ ಇತ್ಯರ್ಥಕ್ಕಾಗಿ ರಾಷ್ಟ್ರೀಯ ಬೆಳೆ ವಿಮಾ ಪೋರ್ಟಲ್ (NCIP) ಅನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಜತೆ ಸಂಪರ್ಕಿಸಲಾಗಿದ್ದು, ಡಿಜಿಕ್ಲೇಮ್ ವ್ಯವಸ್ಥೆಯ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರವನ್ನು ನೇರವಾಗಿ ಜಮಾ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಖಾರಿಫ್–2024ರಿಂದ ಕ್ಲೇಮ್ ಪಾವತಿಯಲ್ಲಿ ವಿಳಂಬ ಮಾಡಿದ ವಿಮಾ ಕಂಪನಿಗಳಿಗೆ ಸ್ವಯಂಚಾಲಿತವಾಗಿ 12 ಶೇಕಡಾ ದಂಡ ವಿಧಿಸಲಾಗುತ್ತಿದೆ. ಇದೇ ರೀತಿಯಾಗಿ ಖಾರಿಫ್–2025ರಿಂದ ಪ್ರೀಮಿಯಂ ಸಬ್ಸಿಡಿ ಬಿಡುಗಡೆಗೆ ವಿಳಂಬ ಮಾಡುವ ರಾಜ್ಯ ಸರ್ಕಾರಗಳಿಗೂ 12 ಶೇಕಡಾ ದಂಡ ವಿಧಿಸುವ ನಿಯಮ ಜಾರಿಗೆ ಬರಲಿದೆ.

ಇದರ ಜೊತೆಗೆ, ಎಸ್ಕ್ರೊ ಖಾತೆ ಕಡ್ಡಾಯ, CCE-ಅಗ್ರಿ ಆ್ಯಪ್, YES-TECH ರಿಮೋಟ್ ಸೆನ್ಸಿಂಗ್, ಭೂ ದಾಖಲೆಗಳ ಡಿಜಿಟಲ್ ಏಕೀಕರಣ ಹಾಗೂ CLAP ಆ್ಯಪ್‌ಗಳಂತಹ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಈ ಎಲ್ಲಾ ಕ್ರಮಗಳ ಮೂಲಕ ಬೆಳೆ ವಿಮಾ ಕ್ಲೇಮ್‌ಗಳ ತ್ವರಿತ ಇತ್ಯರ್ಥ, ಪಾರದರ್ಶಕತೆ ಹೆಚ್ಚಳ ಹಾಗೂ ಹವಾಮಾನ ವೈಪರೀತ್ಯಗಳಿಂದ ರೈತರಿಗೆ ಹೆಚ್ಚಿನ ಭದ್ರತೆ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.