Wednesday, July 1

‘ಗೃಹಜ್ಯೋತಿ ಕರೆಂಟಿಗೂ ಜಾತಿ ಪ್ರಮಾಣಕ್ಕೂ ಏನು ಸಂಬಂಧ?’; ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಟೀಕಾಸ್ತ್ರ

ಬೆಂಗಳೂರು: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಪರಿಶೀಲನೆ ವೇಳೆ ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳುತ್ತಿರುವ ಕ್ರಮವನ್ನು ವಿರೋಧ ಪಕ್ಷವಾದ ಜೆಡಿಎಸ್ ತೀವ್ರವಾಗಿ ಟೀಕಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್, ಉಚಿತ ವಿದ್ಯುತ್ ಯೋಜನೆಗೆ ಜಾತಿ ಪ್ರಮಾಣ ಪತ್ರ ಹಾಗೂ ಪ್ಯಾನ್ ಕಾರ್ಡ್ ಕೇಳುವುದರ ಹಿಂದಿನ ಉದ್ದೇಶವೇನು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

“ಯಾವುದೇ ಷರತ್ತುಗಳಿಲ್ಲದೆ ಎಲ್ಲರಿಗೂ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಮನೆ-ಮನೆ ಪರಿಶೀಲನೆ ಹೆಸರಿನಲ್ಲಿ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡಲು ಪ್ರಯತ್ನಿಸುತ್ತಿದೆ” ಎಂದು ಜೆಡಿಎಸ್ ಆರೋಪಿಸಿದೆ.

ಇದಲ್ಲದೆ, “ಉಚಿತ ವಿದ್ಯುತ್ ಪಡೆಯಲು ಪ್ಯಾನ್ ಕಾರ್ಡ್ ಯಾಕೆ ಬೇಕು? ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ? ಕರ್ನಾಟಕದ ನಿವಾಸಿ ಎಂಬುದನ್ನು ದೃಢೀಕರಿಸಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಸಾಕಾಗುವುದಿಲ್ಲವೇ?” ಎಂದು ಮುಖ್ಯಮಂತ್ರಿ ಅವರನ್ನು ಉದ್ದೇಶಿಸಿ ಪ್ರಶ್ನಿಸಿದೆ.

ಯೋಜನೆಗೆ ಹೊಸ ಷರತ್ತುಗಳನ್ನು ವಿಧಿಸುವ ಮೂಲಕ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಬಡವರು, ರೈತರು ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಅನಗತ್ಯ ದಾಖಲೆಗಳ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದೆ.

“ಎಲ್ಲರಿಗೂ ಫ್ರೀ, ಯಾವುದೇ ಷರತ್ತುಗಳಿಲ್ಲ” ಎಂದು ಭಾಷಣ ಬಿಗಿದು, ಜನರ ಕಿವಿಗೆ ಹೂವಿಟ್ಟು ಅಧಿಕಾರ ಹಿಡಿದ @INCKarnataka ಸರ್ಕಾರ, ಈಗ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದೆ. ಆರ್ಥಿಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಈಗ ಜನಸಾಮಾನ್ಯರನ್ನು ‘ಗೃಹಜ್ಯೋತಿ’ ಯೋಜನೆಯಿಂದ ಹೊರಹಾಕಲು ಕುತಂತ್ರ ಹೆಣೆದಿದೆ!

ಮನೆ-ಮನೆ ಪರಿಶೀಲನೆ ನೆಪದಲ್ಲಿ ಎಸ್ಕಾಂ… pic.twitter.com/OPegtjqEyq

— Janata Dal Secular (@JanataDal_S) July 1, 2026