
ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹರಡುತ್ತಿರುವ ದ್ವೇಷವನ್ನು ತಡೆಯಲು ಶಿಕ್ಷಕರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಜ್ಞಾನ ನೀಡುವುದಷ್ಟೇ ಶಿಕ್ಷಕರ ಜವಾಬ್ದಾರಿಯಲ್ಲ, ಅವರ ಉಜ್ವಲ ಭವಿಷ್ಯ ರೂಪಿಸುವ ಮೂಲಕ ಸಮಾಜವನ್ನು ಸುಧಾರಿಸುವ ಮಹತ್ತರ ಹೊಣೆಗಾರಿಕೆಯೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಬಹುತ್ವದ ರಾಷ್ಟ್ರವಾಗಿದ್ದು, ವಿವಿಧ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ನಡುವೆ ಸೌಹಾರ್ದತೆ ಕಾಪಾಡುವುದು ಎಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದ ವೇಳೆ ನಡೆದ ಮಾನವೀಯತೆಯ ಘಟನೆಯನ್ನು ಉಲ್ಲೇಖಿಸಿದ ಹರಿಪ್ರಸಾದ್, ನಡೆಯಲು ಸಾಧ್ಯವಾಗದೆ ಬಂದಿದ್ದ ಮಹಿಳೆಯೊಬ್ಬರಿಗೆ ಮತ್ತೊಬ್ಬ ಮಹಿಳೆ ಕುರ್ಚಿ ನೀಡಿದ ಪ್ರಸಂಗವನ್ನು ಶ್ಲಾಘಿಸಿದರು. ಇಂತಹ ಮಾನವೀಯ ಮೌಲ್ಯಗಳೇ ಸಮಾಜವನ್ನು ಬಲಪಡಿಸುತ್ತವೆ. ಧರ್ಮಾಂಧತೆ ಮತ್ತು ಅಂಧಭಕ್ತಿಯ ನಡುವೆ ಸೌಹಾರ್ದತೆ ಹಾಗೂ ಮಾತೃ ಹೃದಯ ಹೊಂದಿರುವ ಲಕ್ಷಾಂತರ ಜನರು ದೇಶದಲ್ಲಿದ್ದಾರೆ ಎಂದರು.
ಶಿಕ್ಷಕರ ದಿನವನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಇದೇ ದಿನ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿರುವುದು ನೋವಿನ ಸಂಗತಿ. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂಬ ಆಶಯದೊಂದಿಗೆ ಅವರು ಕೆಲಸ ಮಾಡಿದ್ದರು ಎಂದು ಹರಿಪ್ರಸಾದ್ ಹೇಳಿದರು.
ಶಿಕ್ಷಣದ ಮಹತ್ವವನ್ನು ವಿವರಿಸಿದ ಅವರು, ಸ್ವಾತಂತ್ರ್ಯಕ್ಕೂ ಮುನ್ನ ದೇಶದ ಬಹುಪಾಲು ಜನರಿಗೆ ಶಿಕ್ಷಣದ ಅವಕಾಶ ಇರಲಿಲ್ಲ ಎಂದು ಹೇಳಿದರು. ಸ್ವಾತಂತ್ರ್ಯಾನಂತರ ಮೌಲಾನಾ ಅಬುಲ್ ಕಲಾಂ ಆಜಾದ್ ಸೇರಿದಂತೆ ಹಲವು ಶಿಕ್ಷಣ ಸಚಿವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಸಾಕ್ಷರತೆ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ ಎಂದರು.
ಸಾಕ್ಷರತೆ ಮತ್ತು ಶಿಕ್ಷಣದ ನಡುವೆ ವ್ಯತ್ಯಾಸವಿದೆ. ಪದವಿ ಪಡೆದಿರುವುದು ಮಾತ್ರ ವ್ಯಕ್ತಿಯನ್ನು ಸುಶಿಕ್ಷಿತನನ್ನಾಗಿ ಮಾಡುವುದಿಲ್ಲ. ಸಮಾಜದ ಬಗ್ಗೆ ವೈಚಾರಿಕತೆ, ಮಾನವೀಯತೆ ಮತ್ತು ಜವಾಬ್ದಾರಿಯುತ ದೃಷ್ಟಿಕೋನ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ವಿಕಲಚೇತನರನ್ನು ಸಮಾಜ ಹೇಗೆ ಗೌರವಿಸುತ್ತದೆ ಎಂಬುದೇ ಆ ಸಮಾಜದ ನಾಗರಿಕತೆಯ ಮಾನದಂಡವಾಗಬೇಕು. ಈ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ ಎಂದರು.
ಭಾರತದ ಬಹುತ್ವವನ್ನು ಕಾಪಾಡುವುದು ಅತ್ಯಗತ್ಯ. ವಿವಿಧ ಧರ್ಮಗಳು, ಭಾಷೆಗಳು ಮತ್ತು ಸಂಸ್ಕೃತಿಗಳ ಸಹಬಾಳ್ವೆಯೇ ಭಾರತದ ವೈಶಿಷ್ಟ್ಯ. ಈ ಬಹುತ್ವದ ಆತ್ಮವನ್ನು ಸಂವಿಧಾನವೂ ಪ್ರತಿಬಿಂಬಿಸುತ್ತದೆ. ಧರ್ಮ ಮತ್ತು ಸರ್ಕಾರದ ನಡುವೆ ಅಂತರವಿರಬೇಕು. ಸರ್ಕಾರ ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ; ಎಲ್ಲ ನಾಗರಿಕರಿಗೂ ಸೇರಿದ್ದು ಎಂದು ಹರಿಪ್ರಸಾದ್ ಹೇಳಿದರು.
ಶಿಕ್ಷಣ ನೀತಿಗಳ ಬಗ್ಗೆಯೂ ಟೀಕಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು ಖಾಸಗಿ ಶಾಲೆಗಳು ಬೆಳೆಯುತ್ತಿರುವುದಕ್ಕೆ ಕಾರಣಗಳನ್ನು ಪರಿಶೀಲಿಸಬೇಕಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಮಾನ ಅವಕಾಶ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.
ಶಿಕ್ಷಕರು ಸಮಾಜದ ‘ಅಭಿಪ್ರಾಯ ರೂಪಿಸುವವರು’ (Opinion Makers). ಆದ್ದರಿಂದ ಜಾತಿ, ಧರ್ಮ, ಭಾಷೆಯ ಭೇದಗಳನ್ನು ಮೀರಿ ಮಕ್ಕಳಲ್ಲಿ ವೈಚಾರಿಕತೆ, ಮಾನವೀಯತೆ ಮತ್ತು ಸಂವಿಧಾನ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡಬೇಕು. ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಮೂಲಕ ದೇಶದ ಭವಿಷ್ಯವನ್ನು ಕಟ್ಟುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹರಿಪ್ರಸಾದ್ ಹೇಳಿದರು.
