ಕಬ್ಬು ಮತ್ತು ಸಕ್ಕರೆ ವಿಷಯದಲ್ಲಿ ಕೇಂದ್ರ ಸರ್ಕಾರವೇ FRP ನಿಗದಿಪಡಿಸುತ್ತದೆ; ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: “ಕಬ್ಬು ಮತ್ತು ಸಕ್ಕರೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಅತ್ಯಂತ ಸೀಮಿತವಾಗಿದೆ. ಈ ಸಂಬಂಧಿತ ದರ ನಿಗದಿ ಹಾಗೂ ನಿಯಂತ್ರಣ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವಶದಲ್ಲಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು 2025ರ ಮೇ 6ರಂದು ಎಫ್.ಆರ್.ಪಿ (Fair and Remunerative Price) — ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಪಡಿಸಿರುವುದಾಗಿ ತಿಳಿಸಿದರು.“ಕೇಂದ್ರ ಸರ್ಕಾರವೇ ದರ ನಿಗದಿಪಡಿಸುತ್ತದೆ. ರಾಜ್ಯ ಸರ್ಕಾರದ ಕೆಲಸ ರೈತರಿಗೆ ನಿಗದಿತ ತೂಕ, ಬೆಲೆ ಹಾಗೂ ಸಮಯಕ್ಕೆ ಪಾವತಿ ಖಚಿತಪಡಿಸುವುದಾಗಿದೆ. ಇದು ಕಬ್ಬು ನಿಯಂತ್ರಣ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ,” ಎಂದರು.ಮುಖ್ಯಮಂತ್ರಿ ಅವರು ಮುಂದುವರಿದು, ಸಕ್ಕರೆ ಮೇಲಿನ ನಿಯಂತ್ರಣವೂ ‘ಅಗತ್ಯ ವಸ್ತುಗಳ ಕಾಯ್ದೆ’ ಪ್ರಕಾರ ಕೇಂದ್ರ ಸರ್ಕಾರದ ವಶದಲ್ಲಿದೆ ಎಂದು ಹೇಳಿದರು. “ಯುಪಿಎ ಸರ್ಕಾರದ ಅವಧಿಯಿಂದ 2017–18 ರವರೆಗೆ ರಿಕವರಿ ಶೇ.9.5 ರಷ್ಟಿತ...









