Sunday, September 6

ಶಿಕ್ಷಕರ ಹೆಸರಿನ ಮುಂದೆ ‘Tr.’ ಗೌರವಸೂಚಕ ಪದ ಬಳಸಲು ಅವಕಾಶ: ಸಿಎಂ ಘೋಷಣೆ

ಬೆಂಗಳೂರು: ರಾಜ್ಯದ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ (Teacher) ಎಂಬ ಗೌರವಸೂಚಕ ಪದವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, ‘Tr.’ ಎಂಬುದು ಶಿಕ್ಷಕರ ನಿಸ್ವಾರ್ಥ ಸೇವೆಗೆ ಸಲ್ಲಿಸುವ ಗೌರವದ ಸಂಕೇತ ಎಂದು ಹೇಳಿದರು.

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಇದೆ. ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರು ಸೇರಿದಂತೆ ದೇಶದ ಒಂದು ಕೋಟಿಗೂ ಅಧಿಕ ಶಿಕ್ಷಕರು ಪ್ರತಿನಿತ್ಯ ಮಕ್ಕಳ ಜ್ಞಾನ, ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ವೈದ್ಯರು, ಎಂಜಿನಿಯರ್‌ಗಳು, ರೈತರು, ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಮಾಜವನ್ನು ಮುನ್ನಡೆಸುವ ನಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಮಾರ್ಗದರ್ಶನ ಮತ್ತು ಪರಿಶ್ರಮವಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ‘ನಿನ್ನಿಂದ ಸಾಧಿಸಲು ಸಾಧ್ಯ’ ಎಂಬ ಆತ್ಮವಿಶ್ವಾಸ ತುಂಬುವವರು ಶಿಕ್ಷಕರು ಎಂದು ಮುಖ್ಯಮಂತ್ರಿ ಹೇಳಿದರು.

‘Tr.’ ಕೇವಲ ಪದವಿಯಲ್ಲ, ಸೇವೆಗೆ ಸಲ್ಲಿಸುವ ಗೌರವ

ಶಿಕ್ಷಕರ ಹೆಸರಿನ ಮುಂದೆ ಬಳಸುವ ‘Tr.’ ಕೇವಲ ಗೌರವಸೂಚಕ ಪದವಿಯಲ್ಲ. ಮಕ್ಕಳ ಭವಿಷ್ಯ ರೂಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶಿಕ್ಷಕರ ನಿಸ್ವಾರ್ಥ ಸೇವೆಗೆ ಸಮಾಜ ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿದೆ.

ಶಿಕ್ಷಕರನ್ನು ಗೌರವಿಸುವ ಸಮಾಜದ ಭವಿಷ್ಯವೂ ಉಜ್ವಲವಾಗಿರುತ್ತದೆ. ಮಕ್ಕಳಿಗೆ ದಾರಿ ತೋರಿಸಿ, ಅವರ ನಡತೆಯನ್ನು ತಿದ್ದಿ, ಕನಸುಗಳಿಗೆ ರೆಕ್ಕೆ ನೀಡಿದ ಪ್ರತಿಯೊಬ್ಬ ಶಿಕ್ಷಕರಿಗೂ ರಾಜ್ಯದ ಜನತೆಯ ಪರವಾಗಿ ಗೌರವ ಸಲ್ಲಿಸಲಾಗುತ್ತದೆ ಎಂದು ಡಿಕೆಶಿ ಹೇಳಿದರು.