
ಬೆಂಗಳೂರು: ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ‘ಅಕ್ಕ ರಜತ ಮಹೋತ್ಸವದ ವಿಶ್ವ ಕನ್ನಡ ಸಮ್ಮೇಳನ’ವನ್ನು ಉದ್ದೇಶಿಸಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮುಖ್ಯಮಂತ್ರಿ, ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ರಾಜ್ಯವನ್ನಾಗಿ ರೂಪಿಸುವ ಕನಸನ್ನು ಹಂಚಿಕೊಂಡರು.
‘I have a dream for Karnataka’ ಎಂದು ತಮ್ಮ ಭಾಷಣ ಆರಂಭಿಸಿದ ಅವರು, ಕರ್ನಾಟಕವನ್ನು ಕೇವಲ ಭಾರತದ ಪ್ರಮುಖ ರಾಜ್ಯವನ್ನಾಗಿ ಮಾತ್ರವಲ್ಲದೆ, ಜಗತ್ತು ಗುರುತಿಸುವ, ಮೆಚ್ಚುವ ಹಾಗೂ ಜಾಗತಿಕ ಅವಕಾಶಗಳಿಗೆ ಕೇಂದ್ರವಾಗುವ ರಾಜ್ಯವನ್ನಾಗಿ ಕಟ್ಟಬೇಕು ಎಂಬುದು ತಮ್ಮ ಕನಸು ಎಂದು ಹೇಳಿದರು.
ಬೆಂಗಳೂರು ಹಾಗೂ ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೆ ಬೆಳೆಸುವುದು, ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಯುವಕರ ಭವಿಷ್ಯವನ್ನು ಭದ್ರಗೊಳಿಸುವುದು ಮತ್ತು ಆಡಳಿತವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ತಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದರು. ಸೆಪ್ಟೆಂಬರ್ 10ಕ್ಕೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಪೂರ್ಣಗೊಳ್ಳಲಿವೆ ಎಂದರು.
‘ಕನ್ನಡಿಗ ಎಂದರೆ ಕೇವಲ ಭಾಷೆಯಲ್ಲ; ಅದು ಬದುಕಿನ ಪರಂಪರೆ’
‘ಅಕ್ಕ’ ಸಮ್ಮೇಳನ ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಕನ್ನಡದ ಜಾತ್ರೆ, ಕರ್ನಾಟಕದ ಹಬ್ಬ, ನೆನಪುಗಳ ಹಬ್ಬ ಹಾಗೂ ನಮ್ಮ ಬೇರುಗಳನ್ನು ಮತ್ತೆ ಸ್ಪರ್ಶಿಸುವ ಕ್ಷಣ ಎಂದು ಅವರು ಬಣ್ಣಿಸಿದರು.

ಕನ್ನಡಿಗರಾಗಿರುವುದು ಕೇವಲ ಕನ್ನಡ ಮಾತನಾಡುವುದಕ್ಕೆ ಸೀಮಿತವಲ್ಲ. ಅದು ಸಂಸ್ಕೃತಿ, ಜೀವನ ವಿಧಾನ ಮತ್ತು ಮೌಲ್ಯಗಳ ಪರಂಪರೆ. ಮಲೆನಾಡಿನ ಮಳೆ, ಕರಾವಳಿಯ ಸಮುದ್ರ, ಕಲ್ಯಾಣ ಕರ್ನಾಟಕದ ಗಟ್ಟಿತನ, ಕಿತ್ತೂರು ಕರ್ನಾಟಕದ ಹೃದಯವಂತಿಕೆ, ಹಳೆ ಮೈಸೂರು ಭಾಗದ ಸಂಸ್ಕೃತಿ ಹಾಗೂ ಬೆಂಗಳೂರಿನ ಜಾಗತಿಕ ದೃಷ್ಟಿಕೋನ—ಇವೆಲ್ಲವೂ ಸೇರಿ ಕರ್ನಾಟಕವಾಗಿದೆ ಎಂದು ಹೇಳಿದರು.
ಕನ್ನಡದೊಳಗೆ ವಚನಕಾರರ ಚಿಂತನೆ, ದಾಸರ ಭಕ್ತಿ, ಕುವೆಂಪು ಅವರ ವಿಶ್ವಮಾನವ ಸಂದೇಶ, ಬೇಂದ್ರೆಯವರ ಕಾವ್ಯದ ಸೊಗಸು, ಶಿವರಾಮ ಕಾರಂತರ ಜ್ಞಾನ, ಮಾಸ್ತಿಯವರ ಸಾಹಿತ್ಯದ ಆಳ ಮತ್ತು ಪು.ತಿ. ನರಸಿಂಹಾಚಾರ್ ಅವರ ಭಾವವಿದೆ ಎಂದು ಕನ್ನಡದ ಶ್ರೀಮಂತ ಪರಂಪರೆಯನ್ನು ಸ್ಮರಿಸಿದರು.
100 ದಿನಗಳು ದೊಡ್ಡ ಅವಧಿಯಲ್ಲ. ಆದರೆ ದಿಕ್ಕು ತೋರಿಸಲು, ಉದ್ದೇಶವನ್ನು ಸ್ಪಷ್ಟಪಡಿಸಲು ಮತ್ತು ಹೊಸ ಪಯಣಕ್ಕೆ ಚಾಲನೆ ನೀಡಲು ಇದು ಸಾಕಷ್ಟು ಸಮಯ. ಈ ಅಲ್ಪ ಅವಧಿಯಲ್ಲೇ ಹಲವು ಹೊಸ ಕಾರ್ಯಕ್ರಮಗಳು, ಚಿಂತನೆಗಳು ಮತ್ತು ಆಡಳಿತ ಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ತಮ್ಮ ದೃಷ್ಟಿ ಎರಡು-ಮೂರು ವರ್ಷಗಳಿಗೆ ಸೀಮಿತವಾಗಿಲ್ಲ. 2037ರ ವೇಳೆಗೆ ಕರ್ನಾಟಕವನ್ನು ಜಗತ್ತು ಮತ್ತೊಂದು ದೃಷ್ಟಿಯಿಂದ ನೋಡುವಂತಾಗಬೇಕು ಎಂಬುದು ತಮ್ಮ ಕನಸು ಎಂದು ಅವರು ಹೇಳಿದರು.
25 ವರ್ಷಗಳನ್ನು ಪೂರೈಸಿರುವ ಇಡೀ ‘ಅಕ್ಕ’ ಕುಟುಂಬಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ ಅವರು, ಕಳೆದ 25 ವರ್ಷಗಳಲ್ಲಿ AKKA ಕೇವಲ ಒಂದು ಸಂಘಟನೆಯಾಗಿ ಉಳಿಯದೆ ಕುಟುಂಬವಾಗಿ ಬೆಳೆದಿದೆ. ದೇಶ-ದೇಶಗಳ ಗಡಿ ಹಾಗೂ ತಲೆಮಾರುಗಳನ್ನು ದಾಟಿ ಕನ್ನಡಿಗರನ್ನು ಒಗ್ಗೂಡಿಸಿರುವ AKKA, ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.
